ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಭಾರತದಲ್ಲಿ ಮತದಾನ ಪ್ರಜಾಪ್ರಭುತ್ವದ ಬುನಾದಿಯಾಗಿದೆ. ಪ್ರತಿಯೊಬ್ಬ ನಾಗರಿಕನಿಗೂ ಅದರಲ್ಲಿ ಭಾಗವಹಿಸುವ ಹಕ್ಕು ಮತ್ತು ಜವಾಬ್ದಾರಿ ಇದೆ. ನಾವು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸಲು ಮತದಾನ ಮಾಡಲೇಬೇಕಾಗಿದೆ. ಪ್ರಜ್ಞಾವಂತ ನಾಗರಿಕರಾಗಿ ನಮ್ಮ ಕರ್ತವ್ಯವನ್ನು ಪೂರೈಸಬೇಕು ಎಂದು ಪ್ರಾಂಶುಪಾಲ ಈ.ಆರ್. ಲಗಳೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶ್ರೀ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಆಶ್ರಯದಲ್ಲಿ ನಡೆದ ಮತದಾನ ಜಾಗೃತಿ ಜಾಥಾ ಮತ್ತು ಸ್ವಚ್ಛತಾ ಅಭಿಯಾನ ಉದ್ದೇಶಿಸಿ ಮಾತನಾಡಿದರು.
ಮತದಾನದ ಮೂಲಕ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿಭಾಯಿಸಬೇಕು. ನ್ಯಾಯಯುತ ಮತ್ತು ಪಾರದರ್ಶಕ ಚುನಾವಣಾ ಪ್ರಕ್ರಿಯೆ, ಸಾಮಾಜಿಕ ಮತ್ತು ರಾಜಕೀಯ ಸಮಾನತೆ ಸಾಧಿಸಲು ಕಡ್ಡಾಯವಾಗಿ ಎಲ್ಲರೂ ಮತ ಚಲಾಯಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಎಮ್.ಎಫ್. ತಹಸೀಲ್ದಾರ್ ಮಾತನಾಡಿ, ಮತದಾನವು ಜನರ ಇಚ್ಛೆ ಮತ್ತು ಆಕಾಂಕ್ಷೆ ಪ್ರತಿಬಿಂಬಿಸುವ ಸರ್ಕಾರವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ಮತದಾನದ ಮೂಲಕ ನಾಗರಿಕರು ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶವನ್ನು ಮಾಡುತ್ತದೆ. ಮತದಾನವು ಜವಾಬ್ದಾರಿಯುತ ಮತ್ತು ಸ್ಪಂದಿಸುವ ಸರ್ಕಾರದ ರಚನೆಗೆ ಕಾರಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್.ಎಲ್. ಗುಳೇದಗುಡ್ಡ, ಕೆ.ಎಚ್. ಅಂಜನಮೂರ್ತಿ, ಶಿವಮೂರ್ತಿ ಕುರೇರ, ಬಸವರಾಜ ಪಲ್ಲೇದ, ಎಸ್.ಬಿ. ಕನ್ನಾಳ, ಎಸ್.ಎಸ್. ಮುಂಜಿ, ಸಜಲಾ, ಎಂ.ಎಂ. ಜಮಾದಾರ, ವಿನಯಶ್ರೀ ಪಿ, ಎಂ.ಎಸ್. ಹೊನ್ನೂರ, ಸಿ.ಎಮ್. ರಾಥೋಡ, ವಿ.ಕೆ. ಸಂಗನಾಳ, ವಿ.ಸಿ. ಇಲ್ಲೂರ, ಕಿರಣ ರಂಜಣಗಿ, ಶಂಕರ ನರಗುಂದ, ಚಂದ್ರು ಸಂಶಿ, ಬಿ.ಎಸ್. ಮಡಿವಾಳರ, ಪಿ.ವಾಯ್. ಶಾಸ್ತಿç ಸೇರಿದಂತೆ ಇನ್ನಿತರರು ಇದ್ದರು.