ವಿಜಯಸಾಕ್ಷಿ ಸುದ್ದಿ, ಗದಗ : ಈ ಬಾರಿಯ ಭೀಕರ ಬರಗಾಲಕ್ಕೆ ಅನ್ನದಾತ ರೈತನ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಅತಿವೃಷ್ಟಿ-ಅನಾವೃಷ್ಟಿ ಎರಡೂ ಸಂದರ್ಭಗಳಲ್ಲಿ ರೈತರಿಗೆ ಸಂಕಷ್ಟ ಕಟ್ಟಿಟ್ಟಟ ಬುತ್ತಿ.
ಬೇಸಿಗೆಯಲ್ಲಿ ಹಾಗೂ ಹೀಗೂ ನೀರಾವರಿಗೆ ಒಂದು ವ್ಯವಸ್ಥೆ ಮಾಡಿಕೊಂಡಿದ್ದರೂ ಬರದ ಭೀತಿ ತಪ್ಪಿದ್ದಲ್ಲ.
ಒಂದೆಡೆ ಜಮೀನಿನಲ್ಲಿರುವ ಬೋರ್ವೆಲ್ಗಳು ದಿನೇ ದಿನೇ ಪಾತಾಳ ತಲುಪುತ್ತಿದ್ದರೆ, ಜಮೀನಿಗೆ ನೀರುಣಿಸುವುದಾದರೂ ಹೇಗೆ? ತುಂಗಭದ್ರಾ ನದಿ ತೀರದ ರೈತರ ಗೋಳಾಟವಂತೂ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಅಡಿಕೆ, ಬಾಳೆ ತೋಟಗಳು ಒಣಗುತ್ತಿದ್ದು, ರೈತರು ಕಕ್ಕಾಬಿಕ್ಕಿಯಾಗಿದ್ದಾರೆ.
ಎದೆಯೆತ್ತರಕ್ಕೆ ಬೆಳೆದು ನಿಂತಿದ್ದ ಅಡಿಕೆ ತೋಟಗಳು ಬಳಲಿ ಬೆಂಡಾಗಿವೆ. ಇನ್ನೊಂದೆಡೆ, ಹಸಿರಾಗಿ ಬೆಳೆದು ನಿಂತಿದ್ದ ಬಾಳೆ ತೋಟಗಳು ಬೆಂಕಿ ಬಿಸಿಲಿಗೆ ಹಳದಿ ಬಣ್ಣಕ್ಕೆ ತಿರುಗಿ ಕಮರುತ್ತಿವೆ. ಲಕ್ಷಾಂತರ ಖರ್ಚು ಮಾಡಿ ಬೆಳೆದ ಬೆಳೆ ಕಣ್ಣ ಮುಂದೆಯೇ ಹಾಳಾಗುತ್ತಿದ್ದರೆ, ಮನೆ ಮಕ್ಕಳೇ ಸೊರಗಿಹೋದ ಅನುಭವ ರೈತರದ್ದು. ಈ ದೃಶ್ಯಗಳು ಕಂಡುಬಂದಿದ್ದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ, ಗುಮ್ಮಗೋಳ ಸೇರಿ ಹಲವು ಗ್ರಾಮಗಳಲ್ಲಿ. ಬೆಂಕಿ ಬಿಸಿಲು ರೈತರು ಬದುಕನ್ನೇ ಸುಟ್ಟು ಹಾಕುತ್ತಿದೆ. ತುಂಗಭದ್ರಾ ನದಿ ತೀರದಲ್ಲಿ ತೋಟಗಾರಿಕೆ ಬೆಳೆ ಮಾಡಿಕೊಂಡು ರೈತರು ಖುಷಿಯಾಗಿದ್ದರು. ಆದರೆ, ಈ ವರ್ಷದ ಭೀಕರ ಬರಕ್ಕೆ ಅನ್ನದಾತರ ಬದುಕು ಬಾಡುತ್ತಿದೆ.
ಈ ಭಾಗದಲ್ಲಿ ರೈತರು ಹೆಚ್ಚಾಗಿ ಅಡಿಕೆ, ಬಾಳೆ ಬೆಳೆಯುತ್ತಾರೆ. ಆದರೆ, ಭೀಕರ ಬರಕ್ಕೆ ಈಗಾಗಲೇ ತುಂಗಭದ್ರಾ ನದಿ ಸಂಪೂರ್ಣ ಬತ್ತಿಹೋಗಿದೆ. ಅಂತರ್ಜಲ ಪಾತಾಳಕ್ಕೆ ಕುಸಿದು ಬೊರ್ವೆಲ್ಗಳಲ್ಲಿ ನೀರು ಮರೀಚಿಕೆಯಾಗಿದೆ. ನದಿ ನಂಬಿ ತೋಟಗಾರಿಕೆ ಬೆಳೆ ಬೆಳೆದ ರೈತರು ಗೋಳಾಡುತ್ತಿದ್ದಾರೆ. ನೀರಿನ ಕೊರತೆಯಿಂದ ಲಕ್ಷಾಂತರ ಖರ್ಚು ಮಾಡಿ ಬೆಳೆದ ಅಡಿಕೆ, ಬಾಳೆ ತೋಟಗಳು ಬಿಸಿಲಿಗೆ ಒಣಗುತ್ತಿವೆ. ಅಡಿಕೆ ಬೆಳೆ ಫಸಲು ಪಡೆಯಬೇಕೆಂದರೆ ಮೂರ್ನಾಲ್ಕು ವರ್ಷ ಕಾಯುವುದು ಅನಿವಾರ್ಯ. ಖರ್ಚುಗಳೂ ತುಸು ಹೆಚ್ಚೇ ಇರುತ್ತವೆ. ಎರಡು ವರ್ಷಗಳಿಂದ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡು ಬಂದಿದ್ದ ತೋಟವೀಗ ಒಣಗಿ ನಿರಾಸೆ ಮೂಡಿಸಿದೆ.
ತುಂಗಭದ್ರಾ ನದಿ ತೀರದ ಗ್ರಾಮಗಳ ರೈತರ ಬದುಕು ಈ ಮೊದಲು ಬಂಗಾರವಾಗಿತ್ತು. ನದಿ ನೀರು ಬಳಸಿ ಬಂಗಾರದಂಥ ಬೆಳೆ ಬೆಳೆದು ಖುಷಿಯಾಗಿದ್ದರು. ಆದರೆ, ಈ ಸಲದ ಭೀಕರ ಜಲಕ್ಷಾಮ ದಿಕ್ಕು ತೋಚದಂತೆ ಮಾಡಿದೆ. ರಾಜ್ಯದ ಕೆಲ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆಯಾದರೂ, ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ಮನೆ ಬಳಕೆಗೂ ನೀರಿನ ಕೊರತೆಯಾಗುತ್ತಿರುವಾಗ, ತೋಟ ಉಳಿಸಿಕೊಳ್ಳುವುದಾದರೂ ಹೇಗೆ ಎಂಬ ಚಿಂತೆಯ ಬಲೆ ರೈತರನ್ನು ಸುತ್ತಿಕೊಳ್ಳುತ್ತಿದೆ. ಆಕಾಶದತ್ತ ದೃಷ್ಟಿ ಹರಿಸುವುದೇ ಕಾಯಕವಾಗಿರುವುದು ಬೇಸರದ ಸಂಗತಿ.