ವಿಜಯಸಾಕ್ಷಿ ಸುದ್ದಿ, ಗದಗ : ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿ, ಸ್ತ್ರೀ ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಬೀತುಪಡಿಸಿದ್ದಾಳೆ. ಇಂದಿನ ಯುವ ಜನಾಂಗದ, ಒಂದು ಕುಟುಂಬದ, ಸಮಾಜದ ಬಹುದೊಡ್ಡ ಶಕ್ತಿಯಾಗಿ ಮಹಿಳೆಯ ಪಾತ್ರ ಹಿರಿದಾಗಿದೆ. ಮೌಲ್ಯಗಳು ಕುಸಿದು ಹೋಗುತ್ತಿರುವ ಇಂದಿನ ಸಂದರ್ಭದಲ್ಲಿ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರುವಾಗಿ ಪ್ರತಿಯೊಬ್ಬರ ಬದುಕಿನ ದಿವ್ಯ ಶಕ್ತಿಯಾಗಿ, ಮಕ್ಕಳಿಗೆ ಸಂಸ್ಕಾರವನ್ನು ನೀಡುವಲ್ಲಿ ತಾಯಿಯ ಜವಾಬ್ದಾರಿ ಮುಖ್ಯವಾಗುತ್ತದೆ. ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಮಹಿಳೆ ತನ್ನನ್ನು ತಾನು ಆತ್ಮವಿಮರ್ಶೆ ಮಾಡಿಕೊಂಡು ತನ್ನ ಪಾತ್ರವನ್ನು ಸರಿಯಾಗಿ ನಿಭಾಯಿಸುವ ದಿಟ್ಟತನ ತೋರಬೇಕು ಎಂದು ಶಿವಶರಣೆ ಡಾ. ನೀಲಮ್ಮತಾಯಿ ಅಸುಂಡಿ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಆದಿಶಕ್ತಿ ನಗರದ ಆಧ್ಯಾತ್ಮ ವಿದ್ಯಾಶ್ರಮದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ಆಶೀರ್ವಚನ ನೀಡಿದರು.
ಉಪನ್ಯಾಸ ನೀಡಿದ ಎಫ್.ಎಂ. ಡಬಾಲಿ ಪಿಯು ಕಾಲೇಜಿನ ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಮಾತನಾಡಿ, ಮಹಿಳೆ ಇಂದು ಬಹು ಆಯಾಮಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಜೊತೆಗೆ ಮನೆ ಬೆಳಗುವ ನಂದಾದೀಪವಾಗಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡುವ ಮಹಾ ಶಿಕ್ಷಕಿಯಾಗಿ, ಬದುಕಿಗೆ ಮಾರ್ಗ ತೋರುವ ಮಾರ್ಗದರ್ಶಿಯಾಗಿದ್ದಾಳೆ ಎನ್ನುವುದು ಎಷ್ಟು ಸತ್ಯವೋ, ಅಷ್ಟೇ ದೌರ್ಜನ್ಯಗಳು ಇಂದಿಗೂ ಮಹಿಳೆಯ ಮೇಲೆ ಆಗುತ್ತಿರುವುದು ಬೂದಿ ಮುಚ್ಚಿದ ಕೆಂಡದಂತೆ ಮುಂದುವರಿಯುತ್ತಲೇ ಸಾಗಿದೆ.
ಕೆಲವು ನಕಾರಾತ್ಮಕ ಮನಸ್ಥಿತಿಗಳು ಮಹಿಳೆಯನ್ನು ಎಲ್ಲೋ ಒಂದು ಕಡೆ ಕುಗ್ಗಿಸುವ ಕುತಂತ್ರವನ್ನು ಸಹ ನಡೆಸಿರುವುದು ಇಂದಿನ ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದೆಲ್ಲವನ್ನರಿತು ಇಂದಿನ ಎಲ್ಲಾ ಮಹಿಳಾ ಸಮುದಾಯ ಮನೋಧೈರ್ಯದಿಂದ, ಪ್ರಜ್ಞಾವಂತಿಕೆಯ ದಿಟ್ಟತನದಿಂದ ಮುಂದುವರಿಯುವುದು ಎಲ್ಲ ಮಹಿಳೆಯರಿಗೆ ಇಂದು ಅತ್ಯವಶ್ಯಕವಾಗಿದೆ ಎಂದರು.
ಉದ್ಘಾಟಕರಾಗಿ ಆಗಮಿಸಿದ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಮಹಿಳಾ ದಿನದ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸುವುದು ಸುಸಂಸ್ಕೃತ ಸಮಾಜದ ಲಕ್ಷಣವಾಗಿದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವುದನ್ನು ಸದಾ ನಾವು ಗಮನಿಸಬೇಕು ಎಂದರು.
ಆಶ್ರಮದ ಸಾಧಕಿ ಶರಣೆ ಮೈತ್ರಾದೇವಿ ಅಮ್ಮನವರು ಮಾತನಾಡುತ್ತಾ, ಇಂದು ಶಿಕ್ಷಣದಲ್ಲಿ ಮಕ್ಕಳಿಗೆ ನೀತಿ ಕಥೆಗಳನ್ನು ಬೋಧನೆ ಮಾಡುವ ಮೂಲಕ ಪಠ್ಯದ ಜೊತೆಗೆ ನೈತಿಕ ಮೌಲ್ಯಗಳನ್ನು ಸಹ ಬೆಳೆಸುವುದು ಅವಶ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಿಕ್ಷಕರ ಸಂಘದ ಗ್ರಾಮೀಣ ವಿಭಾಗದ ಅಧ್ಯಕ್ಷ ಎಸ್.ಆರ್. ಬಂಡಿ, ಕಾರ್ಯದರ್ಶಿ ಕೆ.ಬಿ. ಕೊಣ್ಣೂರ್ ಆಗಮಿಸಿದ್ದರು. ರಾಷ್ಟçಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕಿ ಶಾರದಾ ಕಾತರಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಬಿ.ಬಿ. ಹರ್ತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರ ಬಳಗದಿಂದ ವಚನ ನೃತ್ಯ ಕಾರ್ಯಕ್ರಮ ನೆರವೇರಿತು.
ಶೋಭಾ ಪಾಟೀಲ್ ಸ್ವಾಗತಿಸಿದರು. ಶೈಲಜಾ ಗುಂಜಳ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ಎನ್.ಎಚ್. ಪಾಟೀಲ್, ಎಸ್.ಎಸ್. ಲಕ್ಷಕೊಪ್ಪ, ಪಿ.ಬಿ. ಮುಧೋಳ್ಮಠ, ಎಂ.ಬಿ. ಪರ್ವತಗೌಡ, ವಸಂತ್ ಕಲಕಂಬಿ, ಜಿ.ಎಸ್. ಗೌಡರ್, ಎಸ್.ಜಿ. ಗೌಡ, ಶಿಲ್ಪಾ ಗುಡಗೇರಿ, ಎನ್.ಆರ್. ಹೂಗಾರ್ ಹಾಗೂ ತಾಲೂಕಿನ ಎಲ್ಲ ಶಿಕ್ಷಕರು, ಅಧ್ಯಾತ್ಮ ವಿದ್ಯಾಶ್ರಮದ ಆದಿಶಕ್ತಿ ಬಳಗದ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ವಿ.ಎಂ. ಹಿರೇಮಠ ಮಾತನಾಡಿ, ಒಬ್ಬ ಮಗಳಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಶಿಕ್ಷಕಿಯಾಗಿ ಹೀಗೆ ಹಲವು ಪಾತ್ರಗಳನ್ನು ನಿಭಾಯಿಸುವ ಸ್ತ್ರೀ ಪ್ರತಿಯೊಬ್ಬರ ಬದುಕಿನಲ್ಲಿ ಸ್ಪೂರ್ತಿದಾಯಕಿಯಾಗಿದ್ದಾಳೆ. ಮಹಿಳಾ ಸಮಾನತೆಯನ್ನು ಕಾಯ್ದುಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.