ವಿಜಯಪುರ: ತಾಯಿಯೊಬ್ಬಳು ತನ್ನ ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿದೆ. ತನು ನಿಂಗರಾಜ ಭಜಂತ್ರಿ(5), ರಕ್ಷಾ ಭಜಂತ್ರಿ(3), ಹಸೇನ್ ನಿಂಗರಾಜ ಭಜಂತ್ರಿ(2), 13 ತಿಂಗಳ ಹುಸೇನ್ ಮೃತ ಮಕ್ಕಳಾಗಿದ್ದು,
Advertisement
ಕಾಲುವೆಗೆ ಜಿಗಿದಿದ್ದ ತಾಯಿ ಭಾಗ್ಯಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮೃತರು ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎನ್ನಲಾಗಿದ್ದು,
ಕಾಲುವೆಯಿಂದ ತನು, ರಕ್ಷಾ ಮೃತದೇಹವನ್ನು ಮೀನುಗಾರರು ಹೊರತೆಗೆದಿದ್ದು, ಮತ್ತಿಬ್ಬರ ಮೃತದೇಹ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ನಿಡಗುಂದಿ ಪೊಲೀಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿದ್ದಾರೆ.