ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳೆಯರು ಆರ್ಥಿಕ ಸದೃಢತೆ ಹೊಂದಿ ಬದುಕನ್ನು ಗಟ್ಟಿಗೊಳಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಮಹಿಳಾ ಉದ್ಯಮಿ ಡಾ. ಜಯಶ್ರೀ ಹಿರೇಮಠ ಹೇಳಿದರು.
ಅವರು ರವಿವಾರ ಗದಗ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಹಿಳೆಯರು ಗೃಹ ಕೈಗಾರಿಕೆಯತ್ತ ಚಿತ್ತ ಹರಿಸಿ ಬದುಕನ್ನು ಹಸನುಗೊಳಿಸಬೇಕು. ಸರ್ಕಾರವು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅತಿಥಿಯಾಗಿ ಆಗಮಿಸಿದ್ದ ಜೇಂಟ್ಸ್ ಗ್ರುಪ್ ಆಫ್ ಸಖಿ-ಸಹೇಲಿ ಗದಗ ಅಧ್ಯಕ್ಷೆ ಸುಮಾ ಪಾಟೀಲ ಮಾತನಾಡಿ, ಮಹಿಳೆಯರು ಹಿಡಿದ ಕೆಲಸ ಸಾಧಿಸುವಲ್ಲಿ ಸಮರ್ಥರು. ನಿಷ್ಠೆಯಿಂದ ಕಾರ್ಯನಿರ್ವಹಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹೆಸರಾಂತ ಮಹಿಳಾ ಸಾಧಕಿಯರು ನಮಗೆ ಆದರ್ಶರಾಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಚಿಂತಕಿ ಕವಿತಾ ದಂಡಿನ ಮಾತನಾಡಿ, ಮಹಿಳಾ ಸಬಲೀಕರಣ ಅತ್ಯಂತ ಅವಶ್ಯವಾಗಿದ್ದು, ಶರಣೆ ಅಕ್ಕಮಹಾದೇವಿ ಮಹಿಳಾ ಕುಲಕ್ಕೆ ಕೀರ್ತಿಪ್ರಾಯಳಾಗಿದ್ದಾಳೆ. ಶರಣ ಸಂತತಿಯಲ್ಲಿ ಮನ್ನಣೆ ಪಡೆದು ಅವರಿಂದ ಪ್ರೋತ್ಸಾಹಿಸಲ್ಪಟ್ಟು ಮೊದಲ ಕವಿಯತ್ರಿ ಎನಿಸಿಕೊಂಡಳು ಎಂದರು.
ಪುಷ್ಪಾ ಮುನವಳ್ಳಿ ಪ್ರಾರ್ಥಿಸಿದರು. ಕಾವ್ಯ ದಂಡಿನ ಸ್ವಾಗತಿಸಿದರು. ಲಲಿತಾ ಸಂಗನಾಳ ಪರಿಚಯಿಸಿದರು. ಉಷಾ ನಾಲ್ವಾಡ ನಿರೂಪಿಸಿದರು. ಕೊನೆಯಲ್ಲಿ ರಶ್ಮಿಕಾ ಹಿರೇಮಠ ವಂದಿಸಿದರು. ಕಾರ್ಯಕ್ರಮದಲ್ಲಿ ತಸ್ಲೀಮ ಸೊರಟೂರ, ಗೀತಾ ಚವ್ಹಾಣ್, ಯಮನವ್ವ ಕಟ್ಟಿಮನಿ, ಮಂಜುಳಾ ಸಂಕನಗೌಡ್ರ, ವಿಜಯಲಕ್ಷ್ಮಿ ಭೈರವಾಡೆ, ಅಶ್ವಿನಿ ಮ್ಯಾಗಲಮನಿ, ಸುಜಾತಾ ಗುರುಜಾಲಕರ, ಸಂಜನಾ ಪವಾಡಶೆಟ್ಟರ, ಖುಷಿ ಮೇಹರವಾಡೆ, ಐಶ್ವರ್ಯ ಪಾಟೀಲ, ಮೇಘಾ ಹೂಗಾರ, ಸಂಗೀತಾ ಪಾಟೀಲ, ಅಶ್ವಿನಿ ಭೋಜಕರ, ಸಂಧ್ಯಾ ಕುಲಕರ್ಣಿ, ನಿರ್ಮಿತಾ ಜೋಗರ ಮುಂತಾದವರಿದ್ದರು.