ವಿಜಯಸಾಕ್ಷಿ ಸುದ್ದಿ, ನರೇಗಲ್: ಸ್ತ್ರೀ ಎಂಬುದು ಸಮಾಜದ ಬಹುದೊಡ್ಡ ಶಕ್ತಿಯಾಗಿದ್ದು, ಅವಳಿಂದ ಸಮಾಜ ಹಾಗೂ ಕುಟುಂಬದ ಏಳಿಗೆ ಸಾಧ್ಯವಿದೆ. ಅದರೊಂದಿಗೆ ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುವಲ್ಲಿ ಹಾಗೂ ಕುಟುಂಬ ನಿರ್ವಹಣೆಯಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುವ ಸ್ತ್ರೀ ಅದನ್ನು ಸರಿದೂಗಿಸಿಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದು ಗದಗ ನಗರದ ಅಲಿ ಪಬ್ಲಿಕ್ ಸ್ಕೂಲ್ನ ಪ್ರಾಚಾರ್ಯೆ ಖಾಲೀದಾಸಬ್ರಿನ್ ಗುಳೇದಗುಡ್ಡ ಹೇಳಿದರು.
ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಆಚರಿಸಲಾದ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸ್ತ್ರೀ ಯರು ಕೇವಲ ಅಡುಗೆ ಮನೆಗೆ ಸೀಮಿತವಾಗಿಲ್ಲ. ಅವರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಣ್ಣು ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಸಮಾಜವು ಮಹಿಳೆಯರ ಗೌರವ ಮತ್ತು ಘನತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ಎಸ್.ಎಲ್. ಗುಳೇದಗುಡ್ಡ ಮಾತನಾಡಿ, ದೇಶ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಪಾರ. ಅವರ ಸಕಾರಾತ್ಮಕ ಆಲೋಚನೆಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.
ಈ ವೇಳೆ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶಿವಮೂರ್ತಿ ಕುರೇರ, ಸುನಂದಾ ಮುಂಜಿ, ಕೆ.ಆರ್. ಪಾಟೀಲ, ಅಂಜನಮೂರ್ತಿ ಕೆ.ಎಚ್, ಜಯಶ್ರೀ ಮುತಗಾರ, ನಸರೀನಾಬಾನು ಜಮಾದಾರ, ವಿರೂಪಾಕ್ಷ, ಶಿವಪ್ಪ ಕುರುಬರ, ಅನಿಲಕುಮಾರ, ಎಸ್.ಎಸ್. ಸೂಡಿ, ಅಯ್ಯಪ್ಪ, ವಿ.ಸಿ. ಇಲ್ಲೂರ, ವಿ.ಕೆ. ಸಂಗನಾಳ, ಕಿರಣ ರಂಜಣಗಿ, ಎನ್.ಎಸ್. ಹೊನ್ನೂರ, ಚಂದ್ರು ಸಂಶಿ, ಎಸ್.ಬಿ. ಕಿನ್ನಾಳ, ಬಸವರಾಜ ಎಸ್. ಮಡಿವಾಳರ, ಬಿ.ಕೆ. ಕಂಬಳಿ, ಪ್ರೇಮಾ ಕಾತ್ರಾಳ, ಶಂಕರ ನರಗುಂದ ಇದ್ದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ರೇಣುಕಾ ಧರ್ಮಾಯತ ಮಾತನಾಡಿ, ಮಹಿಳೆ ಭೂಮಿಯಂತೆ ತ್ಯಾಗಮಯಿ. ಭಾರತೀಯ ಸಂಸ್ಕೃತಿಯ ಪ್ರತಿಬಿಂಬವೂ ಹೌದು. ಸಮಾಜದಲ್ಲಿ ಎಲ್ಲರೂ ಆಕೆಯನ್ನು ಪೂಜ್ಯನೀಯ ಭಾವನೆಯಿಂದ ನೋಡಬೇಕು. ಅಷ್ಟೇ ಅಲ್ಲದೆ ಕುಟುಂಬದ ಎಲ್ಲಾ ಸದಸ್ಯರು ಪ್ರಜ್ಞಾವಂತ ನಾಗರಿಕರಾಗಿ ಜೀವಿಸುವಲ್ಲಿ ಸ್ತ್ರೀಯರ ಪಾತ್ರ ಅಮೂಲ್ಯವಾದುದು ಎಂದರು.