ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ವೇದ ಕಾಲದಿಂದಲೂ ಮಹಿಳೆಯರನ್ನು ಗೌರವದ ಸ್ಥಾನಮಾನ, ಪೂಜ್ಯನೀಯ ಭಾವನೆಯಿಂದ ಕಾಣುತ್ತಾ ಬರಲಾಗಿದೆ. ಕಾನೂನಾತ್ಮಕವಾಗಿಯೂ ಮಹಿಳೆಯರಿಗೆ ವಿಶೇಷ ಗೌರವ, ಸ್ಥಾನಮಾನ, ಹಕ್ಕುಗಳಿವೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಭರತಯೋಗೀಶ ಕರಗುದರಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ತಾಲೂಕಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಬೇಟಿ ಬಚಾವೋ-ಬೇಟಿ ಪಡಾವೋ ಕಾರ್ಯಕ್ರಮದ 10ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಿವಾಣಿ ನ್ಯಾಯಾಧೀಶರಾದ ಸತೀಶ ಎಂ, ತಹಸೀಲ್ದಾರ ವಾಸುದೇವ ವಿ.ಸ್ವಾಮಿ ಮಾತನಾಡಿದರು. ಈ ವೇಳೆ ಹೆಣ್ಣುಮಕ್ಕಳ ಜನ್ಮದಿನಾಚರಣೆ, ಅನ್ನ ಪ್ರಾಶನ ಕಾರ್ಯಕ್ರಮ ಹಾಗೂ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯವನ್ನು ಸಿಡಿಪಿಓ ಮೃತ್ಯುಂಜಯ ಗುಡ್ಡದನ್ವೇರಿ ನಿರ್ವಹಿಸಿದರು.
ಸಹಾಯಕ ಅಭಿಯೋಜಕರಾದ ಹೀನಾಕೌಸರ ಗಂಜಿಹಾಳ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ, ವಕೀಲರಾದ ಎನ್.ಐ. ಬೆಲ್ಲದ, ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಲಿತಕ್ಕ ಕೆರಿಮನಿ, ಸಿಡಿಪಿಒ ಅನ್ನಪೂರ್ಣ ಹಳ್ಳಿಗುಡಿ, ಅಂಗನವಾಡಿ ಮೇಲ್ವಿಚಾರಕಿ ನಂದಾ ನವಲೆ, ಗಿರಿಜಾ ಪಾಟೀಲ, ಪೋಷಣ ಸಂಯೋಜಕ ಆನಂದ ಕೊಡ್ಲಿ ಸೇರಿದಂತೆ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು, ಮಕ್ಕಳು ಪಾಲ್ಗೊಂಡಿದ್ದರು.
ಮಹಿಳೆಯರ ದಿನವನ್ನು ಮಾ.8ರಂದು ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿದಿನ ಆಚರಿಸುವಂತಾಗಬೇಕು. ದೇಶದ ಸಂವಿಧಾನ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನಗಳ ಕಾನೂನುಗಳನ್ನು ರಚನೆ ಮಾಡಿದೆ. ಮಹಿಳೆಯರ ರಕ್ಷಣೆಗೆ ಸರ್ಕಾರ ಅನೇಕ ಕಾನೂನು ರಚನೆ ಮಾಡಿದ್ದು, ನಮ್ಮ ಹೆಣ್ಣುಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭರತಯೋಗೀಶ ಕರಗುದರಿ ಕರೆ ನೀಡಿದರು.