ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಪಾಲ್ಗೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬಂದಿದ್ದು, ಇಂದು ಮಹಿಳೆ ಅಬಲೆಯಲ್ಲ, ಸಬಲೆಯಾಗಿದ್ದಾಳೆ ಎಂದು ಮಲ್ಲಿಕಾರ್ಜುನ ಮಹಿಳಾ ಸಂಘದ ಅಧ್ಯಕ್ಷೆ ಕಸ್ತೂರೆವ್ವ ಕಲಕೇರಿ ಹೇಳಿದರು.
ಇಲ್ಲಿಯ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಮಲ್ಲಿಕಾರ್ಜುನ ಮಹಿಳಾ ವಿವಿಧೋದ್ದೇಶಗಳ ಹಾಗೂ ಕಲಾಭಿವೃದ್ಧಿ ಸಂಘವು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಕೋಶಾಧ್ಯಕ್ಷೆ ಸಾವಿತ್ರಿ ಯಲಿಶಿರುಂದ ಮಾತನಾಡಿ, ಮಹಿಳೆಯರು ತಮ್ಮಲ್ಲಿರುವ ಕೀಳರಿಮೆಯನ್ನು ತೊರೆದು ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಸ್ಥಳಿಯವಾಗಿ ಇರುವ ಗ್ರಾಮ ಪಂಚಾಯಿತಿಯಲ್ಲಿ ಇರುವ ಸರಕಾರದ ಸಾಲ ಸೌಲಭ್ಯ, ಉದ್ಯೋಗದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಅನ್ನಪೂರ್ಣ ಪತ್ತಾರ, ಕವಿತಾ ಮುದ್ದಿಕೋಲ ಅವರು ಸಾಧನೆ ಮಾಡಿದ ಮಹಿಳೆಯರ ಕುರಿತು ವಿವರಿಸಿದರು. ಶರಣಮ್ಮ ಕಳ್ಳಿಮಠ, ಶಾಂತಮ್ಮ ಬಡಿಗೇರ, ಪುಷ್ಪಾ ಶಲವಡಿ, ಲಲಿತಾ ಕುಲಕರ್ಣಿ, ಪಾರ್ವತಿ ಮಾಯಾಕರಮಠ, ಜ್ಯೋತಿ ಪಟ್ಟೇದ, ಅನ್ನಪೂರ್ಣ ಹೂಸೂರು, ವೀರಮ್ಮ ಮೇಟಿ ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು. ಲಲಿತಾ ಕುಲಕರ್ಣಿ, ಕಸ್ತೂರೆವ್ವ ಹಡಗಲಿ, ಅನಿತಾ ಗೊತಗಿ ಪ್ರಾರ್ಥಿಸಿದರು. ಬಸಮ್ಮ ರಮಣಿ ಸ್ವಾಗತಿಸಿದರು. ಕಾರ್ಯದರ್ಶಿ ನಾಗರತ್ನ ಹಡಗಲಿ ವಂದಿಸಿದರು.