ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗಂಗಾಪುರ ಪೇಟೆ ಓಣಿಯಲ್ಲಿ ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಲದ ವತಿಯಿಂದ ಮಕರ ಸಂಕ್ರಾಂತಿಯ ಹಬ್ಬದ ನಿಮಿತ್ತ ಉಡಿ ತುಂಬವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಎಸ್ಎಸ್ಕೆ ಸಮಾಜದ ಮಹಿಳಾ ಮಂಡಳದ ಅಧ್ಯಕ್ಷರಾದ ಉಮಾ ಬೇವನಕಟ್ಟಿ ಹಾಗೂ ನಿವೃತ್ತ ಪ್ರಾಂಶುಪಾಲ ಚಂದ್ರಭಾಗ ಕಾಟಿಗರ್ ಮಾತನಾಡಿ, ಮಹಿಳೆಯರು ಸ್ವಾವಲಂಬಿ ಜೀವನವನ್ನು ನಡೆಸಬೇಕು. ಯುವತಿಯರು ಶಿಕ್ಷಣದಲ್ಲಿ ಮುಂದೆ ಬರಬೇಕು. ಕೇವಲ ಶಿಕ್ಷಣ, ಸಾಧನೆಯೆಡೆಗೆ ಗುರಿ ಇಡಬೇಕು. ಕುಟುಂಬ ಹಾಗೂ ಸಮಾಜ ಮೆಚ್ಚುವಂತಹ ಶಿಕ್ಷಣ ಕಲಿತು ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕಬೇಕು ಎಂದು ಹೇಳಿದರು.
ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳದ ಗೌರವ ಅಧ್ಯಕ್ಷೆ ಸರೋಜಾಬಾಯಿ ಟೀಕಂದಾರ, ರೇಣುಕಾಬಾಯಿ ಕಬಾಡಿ ಮಾತನಾಡಿ, ಮಹಿಳೆಯರು ಕೇವಲ ಮನೆಗೆ ಮಾತ್ರ ಸೀಮಿತವಾಗದೆ, ಹೊರಗೆ ಬಂದು ಸಾಮಾಜಿಕ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಲದ ಗೌರವ ಕಾರ್ಯದರ್ಶಿ ಶ್ರೀದೇವಿ ಕಬಾಡಿ ಸ್ವಾಗತಿಸಿ ನಿರೂಪಿಸಿದರು. ಕಾರ್ಯದರ್ಶಿ ಗಂಗಾ ಸಿದ್ದಲಿಂಗ, ಖಜಾಂಚಿ ಅಕ್ಷತಾ ಪವಾರ್ ಅತಿಥಿಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ರಾಜರಾಜೇಶ್ವರಿ ಮಹಿಳಾ ಮಂಡಳದ ಸದಸ್ಯರಾದ ವೀಣಾ ಬದಿ, ಕಸ್ತೂರಿ ಕಬಾಡಿ, ವಿಜಯ ಕಬಾಡಿ, ಗೋದಾವರಿ ಕಬಾಡಿ, ಗಂಗಾ ಪವಾರ, ತುಳಸಾ ಹಬೀಬ, ಲಕ್ಷ್ಮಿ ಕಬಾಡಿ ಮುಂತಾದವರು ಉಪಸ್ಥಿತರಿದ್ದರು.