ಹರಪನಹಳ್ಳಿ: ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಚಿಗಟೇರಿ ಪಿಎಸ್ಐ ಕೆ ನಾಗರತ್ನ ತಿಳಿಸಿದರು.
ತಾಲೂಕಿನ ದೇವರ ತಿಮಲಾಪುರ ಗ್ರಾಮದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶನಿವಾರ ನಡೆದ ತಾಲೂಕು ಮಟ್ಟದ ಮಹಿಳಾ ಜ್ಞಾನ ವಿಕಾಸ ಮತ್ತು ವಿಚಾರ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಮನೆಯಿಂದ ಯಾವುದೇ ಸಭೆ ಸಮಾರಂಭಗಳಿಗು ತೆರಳಿದಾಗ ನಿಮ್ಮ ಬಂಗಾರದ ಒಡವೆಗಳ ಬಗ್ಗೆ ಹೆಚ್ಚಿನ ಗಮನವಿರಬೇಕು, ನಿಮ್ಮ ಮಕ್ಕಳಿಗೆ ಯಾವುದೇ ಪುರುಷ ವ್ಯಕ್ತಿಗಳು ಸ್ಪರ್ಶ ಮಾಡುವ ರೀತಿಯ ಬಗ್ಗೆ ತಾಯಿಯು ತಿಳಿಸಬೇಕು, ಈಚೆಗೆ ಪೊಲೀಸ್ ಇಲಾಖೆಯ ವತಿಯಿಂದ ಮಹಿಳೆಯರ ರಕ್ಷಣೆಗಾಗಿ ವಿಜಯ ಪೊಲೀಸ್ ಪಡೆಯನ್ನು ನೇಮಿಸಿದ್ದಾರೆ.
ಮಹಿಳೆಯರ ಅಭಿವೃದ್ದಿಗಾಗಿ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಜಾರಿಗೆ ಬಂದಿವೆ, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಚಿತ್ರದುರ್ಗ ಧರ್ಮಸ್ಥಳ ಸಂಘದ ಪ್ರಾದೇಶಿಕ ನಿರ್ದೇಶಕಿ ಗೀತಾ ಮಾತನಾಡಿ, ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ, ತಾಯಂದಿರು ಹೆಚ್ಚು ಮೊಬೈಲ್, ಟಿವಿಗಳಿಗೆ ಮಾರು ಹೋಗದೆ ತನ್ನ ಕುಟುಂಬ ಮತ್ತು ಮಕ್ಕಳ ಶಿಕ್ಷಣದ ಜೊತೆಗೆ ಸಂಸ್ಕಾರ, ನಮ್ಮ ಪರಂಪರೆಯ ಸಂಸ್ಕೃತಿಯನ್ನು ಕಲಿಸಿಕೊಡಬೇಕು ಎಂದರು.
ಹೆಣ್ಣು ಕೇವಲ ಕುಟುಂಬಕ್ಕೆ ಸೀಮಿತವಾಗಿರದೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು, ಇಂದು ಎಲ್ಲಾ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯು ಕಾರ್ಯ ನಿರ್ವಹಿಸುತ್ತಿದ್ದಾಳೆ, ಧರ್ಮಸ್ಥಳ ಸಂಘ ನೀಡುವ ಸಾಲ ಸೌಲಭ್ಯಯನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.
ಈ ವೇಳೆ ಪ್ರಮುಖರಾದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎನ್ ಎಸ್ ಮಮತಾ, ಕುಸುಮಾ ಜಗದೀಶ್, ಕ್ಷೇತ್ರ ಯೋಜನಾಧಿಕಾರಿ ಬಾಬು, ಗೀತಾ, ಅನಿತಾ ಮತ್ತು ಉಪನ್ಯಾಸಕಿ ಸುವರ್ಣ ಆರುಂಡಿ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಮೇಲ್ವಿಚಾರಕಿಯರು ಹಾಗೂ ಸೇವಾ ಪ್ರತಿನಿಧಿಗಳು ಇದ್ದರು.



