ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವಂತೆ ಪುರುಷರಿಗಿಂತಲೂ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ಮತ್ತು ಪಾತ್ರವಿದೆ. ಸಮಾಜದ ಕಣ್ಣಾಗಿರುವ ಮಹಿಳೆಯರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದು ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಮಹಾಂತಶೆಟ್ಟರ ಅಭಿಪ್ರಾಯಪಟ್ಟರು.
ಅವರು ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಹಿಳಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಹಿರಿಯ ಸಾಹಿತಿ ಲಲಿತಕ್ಕ ಕೆರಿಮನಿ ಮಾತನಾಡಿ, ಮಹಿಳೆ ಮಗಳು, ಪತ್ನಿ, ತಾಯಿ, ಸ್ನೇಹಿತೆ, ಮಾರ್ಗದರ್ಶಿಯಾಗಿ ಸಮಾಜದ ಕಣ್ಣಾಗಿ ಕಾರ್ಯನಿರ್ವಹಿಸುತ್ತಾಳೆ. ಬದಲಾಗುತ್ತಿರುವ ಇಂದಿನ ವ್ಯವಸ್ಥೆಯಲ್ಲಿ ಮಹಿಳೆಯರು ತಮ್ಮಲ್ಲಿನ ಕೀಳರಿಮೆ ಬಿಟ್ಟು ಸಾಧಕರ ಪ್ರೇರಣೆಯಿಂದ ಎಲ್ಲ ರಂಗಗಳಲ್ಲಿ ಪಾಲ್ಗೊಂಡು ಸಮಾಜಮುಖಿಗಳಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಯಲಕ್ಷ್ಮಿ ಮಹಾಂತಶೆಟ್ಟರ ಮತ್ತು ಬಟ್ಟೂರಿನ ಶಿಕ್ಷಕಿ ಗುರುಬಾಯಿ ಹುಲಸೂರ ಅವರನ್ನು ಸನ್ಮಾನಿಸಲಾಯಿತು. ಬಟ್ಟೂರ ಗ್ರಾಮದ ಮಹಿಳೆಯರ ಮಹೇಶ್ವರಿ ಭಜನಾ ಮಂಡಳಿಯ ಸದಸ್ಯೆಯರು ನಡೆಸಿಕೊಟ್ಟ ಭಜನೆ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತ್ತು. ನಂತರ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ನಡೆಯಿತು. ನೂತನ ಅಧ್ಯಕ್ಷೆಯಾಗಿ ಶಾರದಾ ಮಹಾಂತಶೆಟ್ಟರ, ಉಪಾಧ್ಯಕ್ಷರಾಗಿ ಲಕ್ಷ್ಮವ್ವ ಆಚಾರಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸುವರ್ಣಕ್ಕ ಬಹದ್ದೂರದೇಸಾಯಿ, ಶಕುಂತಲಾ ಹೊರಟ್ಟಿ, ಮಂಜುಳಾ ಸತ್ಯಪ್ಪನವರ, ಶೈಲಾ ಆದಿ, ವಿಜಕ್ಕ ಬಾಳಿಕಾಯಿ, ಜಯಲಕ್ಷ್ಮಿ ಗಡ್ಡದೇವರಮಠ ಮುಂತಾದವರಿದ್ದರು.