ಚಾಮರಾಜನಗರ:- ಜಿಲ್ಲೆಯ ಚಾಮರಾಜನಗರ ತಾಲೂಕಿನ ಕೊಡಿಗಾನೆ ಗ್ರಾಮದಲ್ಲಿ ನಾರಿಮಣಿಯರು ರೈತನೋರ್ವನ ಕಾಲು ಮುರಿದಿದ್ದಾರೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಏಪ್ರಿಲ್ 22ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಳ್ಳುವ ಬದಲಾಗಿ ಕೇವಲ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಮೃತ ವೃದ್ಧನ ಕುಟುಂಬಸ್ಥರಿಂದ ಆರೋಪಿಸಲಾಗಿದೆ.
ಚೆನ್ನಬಸವಯ್ಯ ಎಂಬ ವಯೋ ವೃದ್ಧ ಅಂದು ಸಂಜೆ ತಮ್ಮ ಜಮೀನಿನ ಬಳಿ ತೆರಳಿದ್ದ ವೇಳೆ ಜಮೀನಿನಲ್ಲಿ ಸಂಬಂಧಿಕರು ಹಾಗೂ ಪಕ್ಕದ ಮನೆಯವರಾದ ನಾಗರತ್ನ ತನ್ನ ಹಸುವನ್ನ ಮೇಯಲು ಬಿಟ್ಟಿದ್ದರು. ಇದನ್ನ ನೋಡಿದ ವೃದ್ಧ ಚೆನ್ನಬಸವಯ್ಯ, ಜಮೀನಿನಿಂದ ಹಸುವನ್ನ ಕರೆದುಕೊಂಡು ಹೋಗಿ ಎಂದು ಬುದ್ಧಿ ಮಾತು ಹೇಳಿದ್ದಾರೆ.
ವೃದ್ಧನ ಮಾತಿನಿಂದ ಕೆರಳಿದ ನಾಗರತ್ನ, ಚೆನ್ನಬಸವಯ್ಯ ಜೊತೆ ಜಗಳ ಶುರು ಮಾಡಿದ್ದಾರೆ. ಬಳಿಕ ಸುವಾಸಿನಿ ಹಾಗೂ ರೋಹಿಣಿ ಚೆನ್ನಬಸವಯ್ಯರ ಊರುಗೋಲು ಕಿತ್ತುಕೊಂಡು ಆತನ ಕಾಲಿಗೆ ಹೊಡೆದಿದ್ದಾರೆ. ನಾರಿಮಣಿಯರ ಆಟಾಟೋಪಕ್ಕೆ ವೃದ್ಧನ ಕಾಲಿನ ಮೂಳೆಯೇ ಮುರಿದು ಹೋಗಿದೆ.
ಇನ್ನು ಕಳೆದ ಏಪ್ರಿಲ್ 22ಕ್ಕೆ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಚೆನ್ನಬಸವಯ್ಯರನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 26 ರಂದು ಚೆನ್ನಬಸವಯ್ಯರಿಗೆ ಅನಸ್ಥೇಶಿಯಾ ನೀಡಿ ಆಪರೇಷನ್ ಮಾಡುವ ವೇಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆದರೆ ಚಾಮರಾಜನಗರದ ಪೂರ್ವ ಠಾಣಾ ಪೊಲೀಸರು ಕೇವಲ ಗಲಾಟೆ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.
ಚೆನ್ನಬಸವಯ್ಯ ಸಾವನ್ನಪ್ಪಿದ ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬುದು ಮೃತನ ಕುಟುಂಬಸ್ಥರ ವಾದವಾಗಿದೆ. ಕೇವಲ ಎಫ್ಐಆರ್ ರಿಜಿಸ್ಟರ್ ಮಾಡ್ಕೊಂಡು ಸುಮ್ಮನೆ ಕುಳಿತಿದ್ದಾರೆ, ಕನಿಷ್ಠ ಪಕ್ಷ ಆರೋಪಿಗಳಾದ ನಾಗರತ್ನ, ರೋಹಿಣಿ ಹಾಗೂ ಸುಹಾಸಿನಿಯನ್ನ ಠಾಣೆಗೆ ಕರೆದು ವಿಚಾರಣೆ ನಡೆಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.