ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳಾ ಸಂಘಟನೆಗಳು ಆರ್ಥಿಕವಾಗಿ ಸಬಲರಾಗಲು ಮಹಿಳೆಯರನ್ನು ಪ್ರೇರೇಪಿಸಬೇಕು. ಪಂಚಮಸಾಲಿ ಸಮಾಜದ ತಾಯಂದಿರರು ಸಮಾಜ ಸಂಘಟನೆಯೊಡಿಗೆ ಆರ್ಥಿಕವಾಗಿ ಸದೃಢತೆ ಹೊಂದಬೇಕುಎಂದು ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ಅವರು ಗದುಗಿನ ರಾಣಿ ಚನ್ನಮ್ಮ ಮಹಿಳಾ ಬಳಗದಿಂದ ಜರುಗಿದ ಮಾಸಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮನೆಯ ಆರ್ಥಿಕತೆಯ ಸುಧಾರಣೆಗಾಗಿ ಮಹಿಳೆಯರು ದುಡಿಮೆಗೆ ಮುಂದಾಗಬೇಕು. ಹಣವನ್ನು ಉಳಿತಾಯ ಮಾಡಿ ಅದನ್ನು ಸುರಕ್ಷಿತ ಬ್ಯಾಂಕ್ಗಳಲ್ಲಿ ಇರಿಸಿ, ಅದರಿಂದ ಬರುವ ಲಾಭವನ್ನು ಉಪಯೋಗ ಮಾಡಿಕೊಳ್ಳಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚೇಂಬರ್ ಆಫ್ ಕಾಮರ್ಸ್ನ ಪದಾಧಿಕಾರಿ ಅಶೋಕ ಸಂಕಣ್ಣವರ, ಮಹಿಳೆಯರು ಸದೃಢ ಮನಸ್ಸಿನವರು ಹಾಗೂ ಅಚಲ ನಿರ್ಧಾರದವರು. ಇವರು ಮನಸ್ಸು ಮಾಡಿದಲ್ಲಿ ಕೆಲಸವನ್ನು ನಿಷ್ಠೆಯಿಂದ ಮಾಡಿ ಪೂರ್ತಿಗೊಳಿಸುತ್ತಾರೆ. ಮಹಿಳಾ ಸಮುದಾಯವು ಆರ್ಥಿಕ ಉಳಿಕೆಗಾಗಿ ಶ್ರಮಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಚೇಂಬರ್ ಆಫ್ ಕಾಮರ್ಸ್ನ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಜಯಶ್ರೀ ಪಾಟೀಲ ಮಾತನಾಡಿ, ಸಮಾಜದ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿಯೇ ಈ ಸಂಘವನ್ನು ನಡೆಸುತ್ತಿದ್ದು, ಇಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸವಲತ್ತುಗಳನ್ನು ಸಹ ನೀಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಜಯಶ್ರೀ ಉಗಲಾಟದ ಮಾತನಾಡಿ, ಮಹಿಳೆ ಆರ್ಥಿಕವಾಗಿ ಸದೃಢವಾದಾಗ ಮಾತ್ರ ಎಲ್ಲವನ್ನು ನಿಭಾಯಿಸಬಲ್ಲಳು. ಕೂಡಿಟ್ಟ ಹಣವನ್ನು ಬೇರೆ ಕೆಲಸಗಳಿಗೆ ವಿನಿಯೋಗಿಸಿದಾಗ ಅದು ಸದ್ಬಳಕೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ಸಂಘಟನೆಯಿಂದ ಚೇಂಬರ್ ಆಫ್ ಕಾಮರ್ಸ್ಗೆ ಪದಾಧಿಕಾರಿಗಳಾಗಿ ಆಯ್ಕೆಯಾದ ಪಂಚಮಸಾಲಿ ಸಮಾಜದ ಶರಣಬಸಪ್ಪ ಗುಡಿಮನಿ, ಅಶೋಕ ಸಂಕಣ್ಣವರ, ಚೆನ್ನವೀರಪ್ಪ ಹುಣಸೀಕಟ್ಟಿ, ಪ್ರಕಾಶ ಉಗಲಾಟದ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೇಣುಕಾ ಅಮಾತ್ಯೆ ಮತ್ತು ಸುಜಾತಾ ಗುಡಿಮನಿ ಪ್ರಾರ್ಥಿಸಿದರು. ಕವಿತಾ ದಂಡಿನ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ನಿರ್ವಹಿಸಿದರು. ದೀಪಾ ಉಗಲಾಟ ನಿರೂಪಿಸಿದರು. ಕೊನೆಯಲ್ಲಿ ಸುಮಾ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ನೀಲಮ್ಮ ತೋಟದ, ಸುಶೀಲಾ ಸದಲಾಪೂರ, ಪುಷ್ಪಾ ವಾರದ, ಶಾರದಾ ಕರಮುಡಿ, ಅನ್ನಪೂರ್ಣ ಮಾಡಲಗೇರಿ, ಲಕ್ಷ್ಮಿ ಹಳ್ಳಿಕೇರಿ, ಸುಜಾತಾ ತಂಗೋಡಿ, ಗೀತಾ ಮಾವಿನಕಾಯಿ, ಈರಮ್ಮ ಮಾಡಲಗೇರಿ, ಗೀತಾ ಉಗಲಾಟದ, ಜ್ಯೋತಿ ಭಾವಿಕಟ್ಟಿ, ಮಂಜುಳಾ ತಂಗೋಡಿ, ವಿಜಯಲಕ್ಷ್ಮಿ ಇಳಕಲ್, ಅಕ್ಕಮ್ಮ ಗಡಾದ, ಮಾಲತಿ ಗೊಲ್ಲಪ್ಪನವರ, ಸುಮಂಗಲಾ ಮುಂತಾದವರು ಉಪಸ್ಥಿತರಿದ್ದರು.
ಚೇಂಬರ್ ಆಫ್ ಕಾಮರ್ಸ್ನ ಪದಾಧಿಕಾರಿ ಚೆನ್ನವೀರಪ್ಪ ಹುಣಸೀಕಟ್ಟಿ ಹಾಗೂ ಪ್ರಕಾಶ ಉಗಲಾಟದ ಮಾತನಾಡಿ, ಪಂಚಮಸಾಲಿ ಮಹಿಳಾ ಸಮುದಾಯವು ಸಾಮಾನ್ಯವಾಗಿ ಕೃಷಿಯನ್ನೇ ಅವಲಂಬಿಸಿದ್ದು, ಬದಲಾದ ಕಾಲಮಾನದಿಂದ ಮಹಿಳೆಯರು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಆರ್ಥಿಕ ಸದೃಢತೆ ಹೊಂದುತ್ತಿದ್ದಾರೆ. ನಮ್ಮ ಸಮಾಜದವರು ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಗೆ ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.