ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗುರುಭಕ್ತಿಯೇ ಗುರಿಯನ್ನು ಜಯಿಸುವ ಶಕ್ತಿ. ಜನಿಸಿದಾಗ ಮೂಳೆ-ಮಾಂಸದ ತಡಿಕೆಯಂತಿರುವ ನಮಗೆ ತಾಯಿಯೇ ಮೊದಲ ಗುರು. ತಂದೆ ಬದುಕನ್ನು ತೋರುತ್ತಾನೆ. ಶಿಕ್ಷಕರು ಐಹಿಕ ಗುರುಗಳಾದರೆ, ಆಧ್ಯಾತ್ಮಿಕ ಗುರುಗಳು ಬದುಕುವ ಬಗೆಯನ್ನು ಕಲಿಸುತ್ತಾರೆ ಎಂದು ಶರಣ ಚಿಂತಕ, ಪ್ರಗತಿಪರ ಕೃಷಿಕ ಬಸವರಾಜ ಬೆಂಡಿಗೇರಿ ಅಭಿಪ್ರಾಯಪಟ್ಟರು.
ಅವರು ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೆಳಗಿನ ಬಸ್ತಿಬಣದ ಈಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಮಾಸದ ಮಾತು’ ಸರಣಿಯ 25ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ಶ್ರೀಪಾಲ ಘೋಂಗಡಿ ಉಪನ್ಯಾಸ ನೀಡಿ, `ಅಕ್ಷರ ಮಾತ್ರಂ ಕಲಿಸಿದಾತಂ ಗುರು’ ಎನ್ನುವಂತೆ ಪ್ರತಿಯೊಂದು ಹಂತದಲ್ಲಿ ವಿವಿಧ ರೀತಿಯಿಂದ ನಮಗೆ ಮಾರ್ಗದರ್ಶನ ಮಾಡಿದ ಪ್ರತಿಯೊಬ್ಬರೂ ಗುರು ಸಮಾನರಾಗುತ್ತಾರೆ. ಕೆಲವರು ವೃತ್ತಿಯನ್ನು ಕಲಿಸಿದರೆ, ಕೆಲವರು ಬದುಕಿನ ರೀತಿಯನ್ನು ತಿಳಿಸಿಕೊಡುತ್ತಾರೆ. ಆ ಎಲ್ಲ ಗುರುಗಳನ್ನು ಸ್ಮರಿಸುವ ದಿನವೇ ಈ ಗುರುಪೂರ್ಣಿಮೆ ಎಂದರು.
ಪುರಸಭೆಯ ಮಾಜಿ ಉಪಾಧ್ಯಕ್ಷ ಗುರುಪುತ್ರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಹಿರಿಯ ಅಧ್ಯಾತ್ಮ ಚಿಂತಕರಾದ ಪಾಪಣ್ಣ ಬನ್ನಿ, ಈರಣ್ಣ ಶಿರೋಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಿದ್ದಣ್ಣ ಹಡಪದ, ಸುನೀಲ ಮೆಡ್ಲೇರಿ ಹಾಗೂ ಶ್ರೀನಿಧಿ ಶಿಳ್ಳಿನ ಗುರುಗೀತ ನಮನ ಕಾರ್ಯಕ್ರಮ ನಡೆಸಿಕೊಟ್ಟರು.
ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ನಿರೂಪಿಸಿದರು. ಶಂಕರ ಶಿಳ್ಳಿನ ವಂದಿಸಿದರು. ಈ ಸಂದರ್ಭದಲ್ಲಿ ಈರಣ್ಣ ಗಾಣಿಗೇರ, ಶರಣಪ್ಪ ಯಲಿವಿಗಿ, ಈಶ್ವರ ಬನ್ನಿಕೊಪ್ಪ, ಬಸವರಾಜ ಮೆಡ್ಲೇರಿ, ಕೊಟ್ರೇಶ ಅಳವಂಡಿ, ಲಕ್ಷ್ಮಣ ಮೆಡ್ಲೇರಿ, ನಾಗರಾಜ ಗುಜರಿ, ಈರಣ್ಣ ರಿತ್ತಿ, ಎಚ್.ಎಂ. ಸಪ್ಪಿನ, ಮಹಾಬಲೇಶ್ವರ ಮೆಡ್ಲೇರಿ, ತಿಪ್ಪಣ್ಣ ಹಡಪದ, ಮಂಜುನಾಥ ಮೆಡ್ಲೇರಿ, ನಾರಾಯಣ ಮೆಡ್ಲೇರಿ ಮುಂತಾದವರು ಉಪಸ್ಥಿತರಿದ್ದರು.