ಬೆಂಗಳೂರು:- ಕಾಂತಾರ ಸಿನಿಮಾ ಬಗ್ಗೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು ರಿಷಭ್ ರನ್ನು ಕೊಂಡಾಡಿದರು.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ನಿನ್ನೆ ನನ್ನ ಕುಟುಂಬದವರು, ಕರವೇ ಮುಖಂಡರೊಂದಿಗೆ ಕಾಂತಾರ ಚಾಪ್ಟರ್-1 ಸಿನಿಮಾ ನೋಡಿದೆ. ಸಿನಿಮಾ ನೋಡಿದೆ ಅನ್ನುವುದಕ್ಕಿಂತ ಅನುಭವಿಸಿದೆ ಎಂದು ಹೇಳಿದರೆ ಸರಿಯಾಗುತ್ತದೆ. ಕಾಂತಾರ ಒಂದು ಅನುಭವ, ಸಿನಿಮಾವನ್ನು ಮೀರಿದ ಅದ್ಭುತ ಕಾಣ್ಕೆ. ಇದನ್ನು ಪದಗಳಲ್ಲಿ ವಿವರಿಸಿ ಹೇಳಲಾಗದು. ಕಾಂತಾರ ನಮ್ಮ ಎಣಿಕೆಯನ್ನು, ಗ್ರಹಿಕೆಯನ್ನು ಮೀರಿದ್ದು. ಒಂದು ಸಿನಿಮಾ ನೋಡುಗರಲ್ಲಿ ಇಷ್ಟು ಭಾವತೀವ್ರತೆಯನ್ನು ಉಂಟುಮಾಡಬಹುದು ಎಂಬುದೇ ವಿಸ್ಮಯ ಎಂದು ಹಾಡಿ ಹೊಗಳಿದ್ದಾರೆ.
ರಿಷಬ್ ಶೆಟ್ಟಿ ತಮ್ಮ ನಿರ್ದೇಶನ, ನಟನೆಯಲ್ಲಿ ಭಾರತ ಚಿತ್ರರಂಗದಲ್ಲಿ ಒಂದು ಹೊಸ ಮಾರ್ಗವನ್ನೇ ಸೃಷ್ಟಿಸಿದ್ದಾರೆ. ಕಣ್ಣು, ಕಿವಿ ಮಾತ್ರವಲ್ಲ, ನಮ್ಮ ಇಡೀ ಅಂತರಾತ್ಮವೇ ಸಿನಿಮಾವನ್ನು ಅನುಭವಿಸುತ್ತ, ಒಂದು ಅಲೌಕಿಕ, ಮಾಂತ್ರಿಕ ಜಗತ್ತಿಗೆ ಕೊಂಡೊಯ್ಯುವಂಥ ಮಾಯಾಜಾಲವನ್ನು ಸೃಷ್ಟಿಸಿದ್ದಾರೆ. ಒಂದು ಸಿನಿಮಾವನ್ನು ಹೀಗೂ ಮಾಡಬಹುದಾ ಎಂಬ ಬೆರಗನ್ನು ಮೂಡಿಸುತ್ತಲೇ ಸಿನಿಮಾ ನಿರ್ದೇಶಕರಿಗೆ ಒಂದು ಹೊಸ ದಾರಿಯನ್ನು ತೋರಿದ್ದಾರೆ. ಇಂಥ ಪವಾಡಗಳು ಪದೇಪದೇ ನಡೆಯುವುದಿಲ್ಲ. ಇದಕ್ಕಾಗಿ ರಿಷಬ್ ಶೆಟ್ಟಿ ಅವರನ್ನು ಎಷ್ಟು ಅಭಿನಂದಿಸಿದರೂ ಕಡಿಮೆಯೇ. ಇಂಥ ಅನುಭವವನ್ನು ಕೊಟ್ಟಿದ್ದಕ್ಕಾಗಿ ಅವರಿಗೆ ಕನ್ನಡ ಜನತೆಯ ಪರವಾಗಿ ಪ್ರೀತಿಯ ಹಾರೈಕೆಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದಾರೆ.