ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬಡ ಜನರ ಜೀವನಮಟ್ಟ ಸುಧಾರಿಸಿದೆ. ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಲಕ್ಷ್ಮೇಶ್ವರ ತಾಲೂಕು ಮುಂಚೂಣಿಯಲ್ಲಿದ್ದು, ಶೇ.100ರಷ್ಟು ಪ್ರಗತಿ ಸಾಧಿಸುವಲ್ಲಿ ಇಲಾಖಾವಾರು ಅಧಿಕಾರಿಗಳು ಪರಸ್ಪರ ಸಹಕಾರ, ಸಮನ್ವಯತೆಯೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಲಕ್ಷ್ಮೇಶ್ವರ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ತಿಳಿಸಿದರು.
ಅವರು ಶುಕ್ರವಾರ ತಾ.ಪಂ ಸಭಾಭವನದಲ್ಲಿ ನಡೆದ ಲಕ್ಷ್ಮೇಶ್ವರ ತಾಲೂಕಾ ಮಟ್ಟದ ಗ್ಯಾರಂಟಿ ಸಮಿತಿ ಪದಾಧಿಕಾರಿಗಳ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಸದ್ಯಕ್ಕೆ ಪಡಿತರ ಕಾರ್ಡ್ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ ಕಲ್ಪಿಸಿದ್ದು, ಜನರು ಸದುಪಯೋಗಪಡಿಸಿಕೊಳ್ಳಬೇಕು. ನ್ಯಾಯ ಬೆಲೆ ಅಂಗಡಿಯಲ್ಲಿ ಕಡ್ಡಾಯವಾಗಿ ದಾಸ್ತಾನು ಫಲಕ ಹಾಕುವುದು, ತಿಂಗಳ ಕೊನೆಯವರೆಗೂ ವಿತರಣೆ ಮಾಡಿಸುವುದು, ನ್ಯಾಯ ಬೆಲೆ ಅಂಗಡಿಗಳಿಲ್ಲದ ಹಳ್ಳಿಗಳ ಜನರಿಗೆ ಪಡಿತರ ವಿತರಿಸುವ ಜವಾಬ್ದಾರಿಯುತ ಕಾರ್ಯ ನಿರ್ವಹಿಸಬೇಕು ಹಾಗೂ ಅಕ್ಕಿ ಅಕ್ರಮ ಮಾರಾಟ ತಡೆಯುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಹಾರ ಇಲಾಖೆಯ ಅಧಿಕಾರಿ ಜಗದೀಶ ಕುರುಬರ ಅವರಿಗೆ ತಿಳಿಸಿದರು.
ಶಕ್ತಿ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಸಾರಿಗೆ ಇಲಾಖೆಯ ಅಧಿಕಾರಿ ಅಶೋಕ ಅಣ್ಣಿಗೇರಿ, ತಾಲೂಕಿನಲ್ಲಿ ಪ್ರತಿನಿತ್ಯ ಸರಾಸರಿ 68496 ಜನರು ಪ್ರಯಾಣಿಕರು ಸಂಚಾರ ಮಾಡುತ್ತಿದ್ದು, ಇದರಲ್ಲಿ ಶೇ.68ರಷ್ಟು ಶಕ್ತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಪ್ರತಿ ತಿಂಗಳು 4 ಕೋಟಿಗೂ ಹೆಚ್ಚು ಆದಾಯ ಬರುತ್ತಿದೆ ಎಂದು ಮಾಹಿತಿ ನೀಡಿದರಲ್ಲದೆ, ಉತ್ತಮ ಆದಾಯ ಬರುವುದರಿಂದ ಹೊಸ ಬಸ್ಸುಗಳು, ಹೆಚ್ಚಿನ ಸಾರಿಗೆ ವ್ಯವಸ್ಥೆ, ಬಸ್ಸುಗಳ ದುರಸ್ಥಿ, ಬಸ್ ನಿಲ್ದಾಣದಲ್ಲಿ ಶೌಚಾಲಯ, ಸ್ವಚ್ಛತೆ ಕಾಪಾಡುವ ಕೆಲಸವಾಗಬೇಕು ಎಂದು ಸಮಿತಿ ಸದಸ್ಯ ಶಿವರಾಜಗೌಡ ಪಾಟೀಲ ಹೇಳಿದರು.
ಅಂಗನವಾಡಿಗಳಲ್ಲಿ ಮಕ್ಕಳಿಗೆ ಮೊಟ್ಟೆ ಸೇರಿ ಸರಿಯಾದ ಆಹಾರ ಪೂರೈಕೆಯಾಗಬೇಕು. ಗೃಹಲಕ್ಷ್ಮೀ ಯೋಜನೆ ಎಲ್ಲ ಅರ್ಹರಿಗೂ ತಲುಪಬೇಕು ಎಂದು ಸಿಡಿಪಿಓ ಮೃತ್ಯುಂಜಯ ಗುಡ್ಡದನ್ವೇರಿ ಅವರಿಗೆ ಮಡಿವಾಳರ ತಿಳಿಸಿದರು.
ಈ ವೇಳೆ ಹೆಸ್ಕಾಂ ಇಲಾಖೆ ಅಧಿಕಾರಿ ಮಹಾಂತೇಶ ಇಟಗಿ, ಉದ್ಯೋಗ ವಿನಿಮಯ ಕಚೇರಿಯ ಆನಂದ ಹೊಂಬಾಳೆ ಅವರಿಂದ ಪ್ರಗತಿ ವರದಿ ಪಡೆದು ಸಲಹೆ-ಸೂಚನೆ ನೀಡಿದರು. ತಾ.ಪಂ ಇಓ ಕೃಷ್ಣಪ್ಪ ಧರ್ಮರ ಪಂಚ ಗ್ಯಾರಂಟಿ ಯೋಜನೆ ಸೌಲಭ್ಯದಿಂದ ಅರ್ಹರು ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಸಮಿತಿಯ ಸದಸ್ಯರ ಸಹಕಾರ, ಸಲಹೆ ಜೊತೆಗೆ ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸೋಣ ಎಂದರು.
ಈ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಆರ್.ಆರ್. ನಧಾಪ್, ಕೆ.ಎನ್. ರಿತ್ತಿ, ಕಲ್ಲಪ್ಪ ಗಂಗಣ್ಣವರ, ರಮೇಶ ಬಾರಕೇರ, ಶಶಿಕಲಾ ಬಡಿಗೇರ, ಕಾರ್ತಿಕ ದೊಡ್ಡಮನಿ ಸೇರಿ ಫಲಾನುಭವಿಗಳು ಪಾಲ್ಗೊಂಡಿದ್ದರು.
ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯ ಸೌಲಭ್ಯವನ್ನು ಶೇ.98ರಷ್ಟು ಫಲಾನುಭವಿಗಳು ಪಡೆಯುತ್ತಿದ್ದಾರೆ. ಒಂದಷ್ಟು ಫಲಾನುಭವಿಗಳಿಗೆ ಅವಶ್ಯಕತೆಗಿಂತ ಹೆಚ್ಚಿನ ಅಕ್ಕಿ ಲಭಿಸುವದರಿಂದ ಕಾಳಸಂತೆಯಲ್ಲಿ ಅಕ್ಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿದಂತಾಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಅಕ್ಕಿ ಪ್ರಮಾಣ ಕಡಿಮೆ ಮಾಡಿ ಇತರೇ ಅಗತ್ಯ ಆಹಾರ ಧಾನ್ಯ ವಿತರಿಸುವ ಬಗ್ಗೆ ತಾಲೂಕಾ ಮಟ್ಟದ ಸಮಿತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ನಾಗರಾಜ ಮಡಿವಾಳರ ತಿಳಿಸಿದರು.