ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನಲ್ಲಿ ಪೂರ್ಣಗೊಂಡಿರುವ 16 ಜೆಜೆಎಂ ಕಾಮಗಾರಿಗಳನ್ನು ಹೊರತುಪಡಿಸಿ ಅಪೂರ್ಣಗೊಂಡಿರುವ ಕೆಲಸಗಳ ಸಂಪೂರ್ಣ ಮಾಹಿತಿಯನ್ನು ತಾಲೂಕು ಪಂಚಾಯತ ಇಓಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ, 15 ದಿನಗಳ ಒಳಗಾಗಿ ಮಾಹಿತಿ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಸೂಚನೆ ನೀಡಿದರು.
ಅವರು ಮಂಗಳವಾರ ಶಿರಹಟ್ಟಿಯ ತಾ.ಪಂ ಸಭಾಭವನದಲ್ಲಿ ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ತಾಲೂಕುಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಜೆಜೆಎಂ ಕಾಮಗಾರಿಯಲ್ಲಿ ಯಾವುದೇ ಕಾರಣಕ್ಕೂ ಎಕ್ಸೆಸ್ ಪೇಮೆಂಟ್ ಮಾಡಿದರೆ ಸಹಿಸಲಾಗದು. ಫಿಸಿಕಲ್ ಮೆಜರ್ಮೆಂಟ್ ಇರಬೇಕು. ಹೆಚ್ಚಿಗೆ ಬಿಲ್ ಮಾಡಿದ್ದು ಕಂಡುಬಂದರೆ ಅಂತಹ ಅಧಿಕಾರಿಯನ್ನು ಅಮಾನತುಗೊಳಿಸಲಾಗುವುದು. ಎಷ್ಟು ಪ್ರಮಾಣದ ಕೆಲಸ ಆಗಿರುತ್ತದೆಯೋ ಅಷ್ಟೇ ಪ್ರಮಾಣದ ಬಿಲ್ ತೆಗೆಯಬೇಕು. ಇನ್ನೂ ಕೆಲವು ಕಡೆಗಳಲ್ಲಿ ಜೆಜೆಎಂ ಕೆಲಸಗಳ ವೀಕ್ಷಣೆಗೆ ಪ್ರತ್ಯೇಕ ತಂಡ ಕಳುಹಿಸಿ ಪರಿಶೀಲನೆ ಮಾಡಲಾಗುವುದು ಎಂದು ಸಿಇಓ ಹೇಳಿದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಕಳೆದ 2 ವರ್ಷಗಳಿಂದ ಮತಕ್ಷೇತ್ರದಲ್ಲಿ ಜೆಜೆಎಂ ಕಾಮಗಾರಿಗಳು ಅಪೂರ್ಣಗೊಂಡಿದ್ದರ ಬಗ್ಗೆ ಹಲವು ಸಭೆಗಳ ಮೂಲಕ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅವುಗಳಲ್ಲಿ ಬನ್ನಿಕೊಪ್ಪ, ಸೇವಾನಗರ, ಅಕ್ಕಿಗುಂದ, ಅಕ್ಕಿಗುಂದ ತಾಂಡಾ, ಕುಂದ್ರಳ್ಳಿ ಗ್ರಾಮಗಳಲ್ಲಿ ಕೆಲಸ ಆಗಿಲ್ಲ. ಆದರೆ ಪೇಮೆಂಟ್ ಮಾಡಿದ್ದಾರೆ. ಉಂಡೇನಹಳ್ಳಿಯಲ್ಲಿ ಕಳಪೆ ಗುಣಮಟ್ಟದ ಪೈಪ್ಲೈನ್ ಹಾಕಿದ್ದಾರೆ. ಕೆಲಸ ಪೂರ್ಣಗೊಳ್ಳುವವರೆಗೂ ಬಿಲ್ ಮಾಡದಂತೆ ಅಧಿಕಾರಿಗಳಿಗೆ ಹೇಳಿದರೂ ಸಹ ಕೆಲವು ಕಡೆಗಳಲ್ಲಿ ಬಿಲ್ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.
ಹರದಗಟ್ಟಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣವಿದ್ದರೂ ಸಹ ಹ್ಯಾಂಡ್ ಓವರ್ ಯಾಕೆ ಪಡೆದಿದ್ದೀರಿ, ಅಲ್ಲಿರುವ ಕುಟುಂಬಗಳ ಸಂಖ್ಯೆ ಎಷ್ಟು, ಓಎಚ್ಟಿಯಿಂದ ನೀರು ಸಂಗ್ರಹವಾಗಿ ಎಲ್ಲರಿಗೂ ತಲುಪುತ್ತಿದೆಯೇ ಎಂದು ಶಾಸಕ ಡಾ. ಚಂದ್ರು ಲಮಾಣಿ ಮತ್ತು ಸಿಇಓ ಭರತ್ ಎಸ್ ಗ್ರಾಮ ಪಂಚಾಯಿತಿಯ ಪಿಡಿಓಗೆ ಪ್ರಶ್ನಿಸಿದಾಗ, 65 ಕುಟುಂಬಗಳಿಗೆ ನೀರು ಪೂರೈಕೆಯಾಗುತ್ತಿದೆ ಎಂದು ಪಿಡಿಓ ಪ್ರತಿಕ್ರಿಯಿಸಿದರು.
ಶಿರಹಟ್ಟಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ, ಲಕ್ಷ್ಮೇಶ್ವರ ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಮುಂಡರಗಿ ತಾ.ಪಂ ಇಓ ವಿಶ್ವನಾಥ, ಆರ್ಡಬ್ಲ್ಯುಎಸ್ ಇಇ ರಾಘವೇಂದ್ರ ದೊಡ್ಡಮನಿ, ಪಿಆರ್ಇಡಿ ಎಇಇ ಮಾರುತಿ ರಾಠೋಡ್ ಮತ್ತು ಪಿಡಿಓಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದರೂ ಸಹ ತಮ್ಮ ಕೆಳ ಹಂತದಲ್ಲಿ ಕೆಲಸ ಮಾಡುತ್ತಿರುವ ಟೆಕ್ನಿಕಲ್ ಅಸಿಸ್ಟಂಟ್ಗಳಿಗೆ ಮನವಿ ಮಾಡಿ ಕೆಲಸ ಮಾಡಿಕೊಳ್ಳುವ ಪರಿಸ್ಥಿತಿಯನ್ನು ನಮ್ಮಲ್ಲಿಯ ಅನೇಕ ಪಿಡಿಓಗಳು ಅನುಭವಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ನಿಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕೆಂದು ಶಾಸಕ ಡಾ. ಲಮಾಣಿ ಹೇಳಿದರು. ಇದಕ್ಕೆ ಸಿಇಓ ಭರತ್ ಕೂಡಾ ಮಧ್ಯಪ್ರವೇಶಿಸಿ ಎಲ್ಲ ಕೆಲಸಗಳನ್ನು ಕಲಿತರೆ ಇಂತಹ ಸಮಸ್ಯೆ ಉದ್ಭವಿಸುವದಿಲ್ಲ ಎಂದರು.