ಕಾಮಗಾರಿಗಳಿಗಿಲ್ಲ ಗ್ರಹಣ ಮೋಕ್ಷ

0
Work that is not completed despite the completion of the period
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ನಗರೋತ್ಥಾನ ಯೋಜನೆಯ 8.5 ಕೋಟಿ ರೂ ಅನುದಾನದಲ್ಲಿ ಕೈಗೊಂಡ ರಸ್ತೆ, ಚರಂಡಿ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅವಧಿ ಪೂರ್ಣಗೊಂಡರೂ ಕಾಮಗಾರಿ ಮಾತ್ರ ಪೂರ್ಣಗೊಳ್ಳುವ ಲಕ್ಷಣಗಳು ಕಾಣದೇ ಅಭಿವೃದ್ಧಿ ಮರೀಚಿಕೆಯಾಗಿದೆ.

Advertisement

ರಸ್ತೆ, ಚರಂಡಿ ಮತ್ತು ಮೂಲಭೂತ ಸೌಲಭ್ಯಗಳಿಗಾಗಿ ಜನತೆ ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ನಗರೋತ್ಥಾನದ ಶೇ.24.10ರಡಿ 40.97 ಲಕ್ಷ ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ, ಅಂಬೇಡ್ಕರ ನಗರದಲ್ಲಿ ಸ್ನಾನ ಮತ್ತು ವಿಶ್ರಾಂತಿ ಗೃಹ, ಎಸ್‌ಸಿಪಿ ಘಟಕದಡಿ 116.62 ಲಕ್ಷ ರೂ ಅನುದಾನದಲ್ಲಿ ವಾರ್ಡ್ ನಂ 1, 20, 22 ಮತ್ತು 23ರಲ್ಲಿ ರಸ್ತೆ ಅಭಿವೃದ್ಧಿ, ವಾರ್ಡ್ ನಂ 11, 12 ಮತ್ತು 13ರಲ್ಲಿ ಬಳಿಗಾರ ಓಣಿಯಿಂದ ಸೋಮೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ, ಸಮುದಾಯ ಶೌಚಾಲಯ ನಿರ್ಮಾಣ ಸೇರಿ ಅಂದಾಜು 2 ಕಿ.ಮೀ ಡಾಂಬರೀಕರಣ, 2 ಕಿ.ಮೀ ಚರಂಡಿ ನಿರ್ಮಾಣ ಮತ್ತು 2 ಕಿ.ಮೀನಷ್ಟು ಪೆವರ್ಸ್ ಹಾಕುವ ಕಾಮಗಾರಿಗಳಲ್ಲಿ ಕೆಲವು ಮಾತ್ರ ಪೂರ್ಣಗೊಂಡು ಬಹುತೇಕ ಕಾಮಗಾರಿಗಳಿಗೆ ಗ್ರಹಣ ಹಿಡಿದಂತಾಗಿದೆ.

ನಗರೋತ್ಥಾನ ಕಾಮಗಾರಿಗೆ ಭೂಮಿಪೂಜೆ ನೆರವೇರಿ ವರ್ಷಗಳೇ ಗತಿಸಿವೆ. ಈಗಾಗಲೇ ಗುತ್ತಿಗೆದಾರರಿಗೆ 2.5 ಕೋಟಿ ರೂ ಬಿಲ್ ಪಾವತಿಯಾಗಿದೆ. ಕೆಲ ವಾರ್ಡ್ಗಳಲ್ಲಿ ಸದಸ್ಯರ ಒತ್ತಾಯದ ಮೆರೆಗೆ ಅರೆಬರೆ ಕಾಮಗಾರಿ ಮಾಡಲಾಗಿದೆ.

ಪಟ್ಟಣದಲ್ಲಿ ನಾಲ್ಕೈದು ವರ್ಷಗಳ ಹಿಂದೆ ನಡೆದ ಅಂದಾಜು 40 ಕೋಟಿಗೂ ಹೆಚ್ಚು ರೂಪಾಯಿ ವೆಚ್ಚದ ಒಳಚರಂಡಿ ಕಾಮಗಾರಿ ಸಂಪೂರ್ಣ ಹಳ್ಳ ಹಿಡಿದಿದ್ದಲ್ಲದೇ ಉತ್ತಮವಾಗಿಯೇ ಇದ್ದ ರಸ್ತೆಗಳೂ ಹಾಳಾಗಿವೆ.

Work that is not completed despite the completion of the period

ಪಟ್ಟಣದ ಬಹುತೇಕ ವಾರ್ಡ್ಗಳಲ್ಲಿ ಮಳೆಗಾಲದಲ್ಲಿ ರಸ್ತೆಗಳು ಕೆಸರಿನಿಂದ, ಬೇಸಿಗೆಯಲ್ಲಿ ಧೂಳಿನಿಂದ ಕೂಡಿರುತ್ತವೆ. ಜನರ ಪರದಾಟ, ನಿತ್ಯ ಯಾತನೆ ತಪ್ಪದಾಗಿದೆ. ಈ ನಡುವೆ ಪುರಸಭೆಯ ಅನುದಾನದಲ್ಲಿ ನಡೆದ ಒಂದಷ್ಟು ಕಾಮಗಾರಿಗಳು ಕಳಪೆಯಿಂದ ಹೇಳ ಹೆಸರಿಲ್ಲದಂತಾಗಿವೆ. ಹತ್ತಾರು ವರ್ಷಗಳಿಂದ ದುರಸ್ಥಿಯನ್ನೇ ಕಾಣದ ಪಟ್ಟಣದಲ್ಲಿನ ರಸ್ತೆಗಳ ಗುಂಡಿ ಮುಚ್ಚಲೆಂದೇ ಲಕ್ಷಾಂತರ ರೂ ಅನುದಾನ ಪೋಲಾಗಿದೆ.

9 ತಿಂಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿಗಳು ಒಂದೂವರೆ ವರ್ಷ ಕಳೆದರೂ ಮುಗಿದಿಲ್ಲ. ಗುತ್ತಿಗೆದಾರರು ಯಾರ ಮಾತಿಗೂ ಕ್ಯಾರೇ ಎನ್ನುತ್ತಿಲ್ಲ. ಅಧಿಕಾರಿಗಳೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಬೇಸಿಗೆ ಕಾಲದಲ್ಲಿ ಮಾಡಬೇಕಿದ್ದ ರಸ್ತೆ ಕಾಮಗಾರಿಗಳನ್ನು ಮಳೆಗಾಲದಲ್ಲಿ ಪ್ರಾರಂಭಿಸಿ 2 ತಿಂಗಳಿಂದ ಅರ್ಧಕ್ಕೆ ಕೈಬಿಟ್ಟಿದ್ದಾರೆ.

ಇದರಿಂದ ರಸ್ತೆಗಳ ಸಂಚಾರ ಸಂಪೂರ್ಣ ಸ್ಥಗತಗೊಂಡಿವೆ ಮತ್ತು ಅಗೆದು ಬಿಟ್ಟ ರಸ್ತೆಯಲ್ಲಿ ಮೊಣಕಾಲವರೆಗೆ ನೀರು ನಿಲ್ಲುವಂತಾಗಿದೆ. ಜನರು ನರಕಯಾತನೆ ಅನುಭವಿಸುತ್ತ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಆದರೆ ಈ ಬಗ್ಗೆ ನಿಗಾ ವಹಿಸಬೇಕಿದ್ದ ಅಧಿಕಾರಿಗಳು ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ಮತ್ತು ಸರಿಯಾದ ಮಾಹಿತಿಯನ್ನೂ ನೀಡುತ್ತಿಲ್ಲ. ಜನರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ನಾವು ಕಣ್ತಪ್ಪಿಸಿ ಅಡ್ಡಾಡುವಂತಾಗಿದೆ ಎಂಬ ಅಸಮಾಧಾನದ ಮಾತುಗಳು ಸದಸ್ಯರಿಂದ ಕೇಳಿ ಬರುತ್ತಿವೆ.

ಪಟ್ಟಣದ ಬಳಿಗಾರ ಓಣಿಯಿಂದ ಸೋಮೇಶ್ವರ ತೇರಿನ ಮನೆವರೆಗಿನ ರಸ್ತೆಯನ್ನು 2 ತಿಂಗಳ ಹಿಂದೆಯೇ ಬೇಕಾಬಿಟ್ಟು ಅಗೆದು ಬಿಟ್ಟಿದ್ದಾರೆ. ರಸ್ತೆಯುದ್ದಕ್ಕೂ ನೀರು, ಕೊಳಚೆ, ತ್ಯಾಜ್ಯ ತುಂಬಿಕೊಂಡು ಸಂಚಾರ ನರಕಸದೃಶವಾಗಿದೆ. ಈ ಪ್ರದೇಶದ ಜನರು, ರೈತರು, ಮಕ್ಕಳು, ವೃದ್ಧರು ಕೆಸರು ರಸ್ತೆಯಲ್ಲಿ ಪಡಬಾರದ ಯಾತನೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟವರು ಗಮನವಹಿಸಿ ಮೂರ್ನಾಲ್ಕು ದಿನಗಳಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ಪುರಸಭೆ ಮುಂದೆ ರೈತರೊಡಗೂಡಿ ಪ್ರತಿಭಟನೆ ಮಾಡುತ್ತೇವೆ.
-ನಾಗರಾಜ ಚಿಂಚಲಿ.
ಸ್ಥಳೀಯ ನಿವಾಸಿ.

ನಗರೋತ್ಥಾನ ಕಾಮಗಾರಿಗಳ ನಿಧಾನಗತಿಯ ಬಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು, ಇಂಜಿನಿಯರ್‌ಗಳಿಗೆ ಮಾಹಿತಿ ನೀಡಿದ್ದೇನೆ. ಕೆಲ ಕಡೆ ಟೆಂಡರ್ ಕರೆದು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಬೇಕಾಗಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಒಂದು ವಾರದಲ್ಲಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು.
– ಮಹೇಶ ಹಡಪದ.
ಪ.ಪಂ ಮುಖ್ಯಾಧಿಕಾರಿ.


Spread the love

LEAVE A REPLY

Please enter your comment!
Please enter your name here