ವಿಜಯಸಾಕ್ಷಿ ಸುದ್ದಿ, ಗದಗ: ತಾಂತ್ರಿಕ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ತೋಂಟದಾರ್ಯ ತಾಂತ್ರಿಕ ವಿಭಾಗದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ತನ್ನ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಿಕೊಳ್ಳುತ್ತಿದ್ದು, ಸಿಸ್ಕೋ ಸಾಧನಗಳನ್ನು ಬಳಸಿಕೊಂಡು `ನೆಟ್ವರ್ಕ್ ಸಾಧನಗಳ ಸಂರಚನೆ’ ಎಂಬ ವಿಷಯದಲ್ಲಿ 5 ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರವನ್ನು ಉಪ ಪ್ರಾಂಶುಪಾಲ ಡಾ. ಈರಣ್ಣಾ ಕೊರಚಗಾಂವ್ ಉದ್ಘಾಟಿಸಿ ಮಾತನಾಡಿ, ಕಾರ್ಯಾಗಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು, ಉದ್ಯಮ ವೃತ್ತಿಪರರ ಪರಿಣತಿಯನ್ನು ಬಳಸಿಕೊಳ್ಳಲು ಮತ್ತು ವಿಕಸಿಸುತ್ತಿರುವ ನೆಟ್ವರ್ಕಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರಾಯೋಗಿಕ ಕೌಶಲ್ಯಗಳನ್ನು ಹೆಚ್ಚಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ವಿಭಾಗದ ಮುಖ್ಯಸ್ಥರಾದ ಡಾ. ರಮೇಶ್ ಎಂ.ಬಡಿಗೇರ್ ಮಾತನಾಡಿ, ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಹೆಚ್ಚಿಸುವಲ್ಲಿ, ಆ ಮೂಲಕ ಅವರ ಉದ್ಯೋಗಾವಕಾಶಗಳನ್ನು ಸುಧಾರಿಸುವಲ್ಲಿ ಅವುಗಳ ಪ್ರಮುಖ ಪಾತ್ರವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ರಮೇಶ ಬಡಿಗೇರ್ ಮತ್ತು ಪ್ರೊ. ನೀತಾ ಮುದರಡ್ಡಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಸಂಚಾಲಕರಾದ ಡಾ. ಶರ್ವಾಣಿ ಜಿ.ಎಂ ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು, ಹಿರಿಯ ಉಪನ್ಯಾಸಕರು ಉಪಸ್ಥಿತರಿದ್ದರು.
ಸಂಶೋಧನಾ ಸಂಯೋಜಕಿ ಡಾ. ಅಶ್ವಿನಿ ಅರಳಿ ಅಭಿವೃದ್ಧಿ ಕೋಶದ ಮಹತ್ವ ಕುರಿತು ಮಾತನಾಡಿ ಸ್ವಾಗತಿಸಿದರು. ಡಾ. ಮಲ್ಲಿಕಾರ್ಜುನ ಜಿ.ಡಿ ನೆಟ್ರ್ವಕಿಂಗ್ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಪೊ. ನೀತಾ ಮುದರಡ್ಡಿ ವಂದಿಸಿದರು.