ವಿಜಯಸಾಕ್ಷಿ ಸುದ್ದಿ, ಗದಗ: ವೇತನ ಖಾತೆಗೆ ಸಂಬಂಧಿಸಿದ ಎಚ್.ಆರ್.ಎಮ್.ಎಸ್ ತಾಂತ್ರಿಕ ಸಮಸ್ಯೆ ಪರಿಹರಿಸುವ ಉದ್ದೇಶದಿಂದಾಗಿ ಶೀಘ್ರದಲ್ಲಿಯೇ ರಾಜ್ಯಮಟ್ಟದ ಅಧಿಕಾರಿಗಳು ಗದಗ ನಗರದಲ್ಲಿ ಕಾರ್ಯಾಗಾರವನ್ನು ಸಂಘಟಿಸಿ ಅದನ್ನು ಪರಿಹರಿಸಲಿದ್ದಾರೆ ಎಂದು ರಾಜ್ಯ ಸರಕಾರಿ ನೌಕರ ಸಂಘದ ಗದಗ ಜಿಲ್ಲಾಧ್ಯಕ್ಷ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಹೇಳಿದರು.
ನಗರದ ಸರಕಾರಿ ನೌಕರ ಭವನದಲ್ಲಿ ಶುಕ್ರವಾರ ನಡೆದ ರಾಜ್ಯ ಸರಕಾರಿ ನೌಕರ ಸಂಘದ ಗದಗ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೇತನ ಕುರಿತ ಎಚ್.ಆರ್.ಎಮ್.ಎಸ್ ಸಮಸ್ಯೆಯನ್ನು ಗದಗ ನಗರದಲ್ಲಿ ರಾಜ್ಯಮಟ್ಟದ ಅಧಿಕಾರಿಗಳು ಪರಿಹರಿಸಲಿದ್ದಾರೆ. ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರಾಗಿರುವ ಸಿ.ಎಸ್. ಷಡಕ್ಷರಿ ಅವರ ಮಾರ್ಗದರ್ಶನದಲ್ಲಿ ಸರಕಾರಿ ನೌಕರ ಸಮಸ್ಯೆಗಳನ್ನು ಪರಿಹರಿಸಲಾಗುವದು. ಅಲ್ಲದೇ ಜ್ಯೋತಿ ಸಂಜೀವಿನಿ ಸೇರಿದಂತೆ ನೌಕರರ ಹಲವು ಬೇಡಿಕೆಗಳನ್ನು ರಾಜ್ಯ ಸರಕಾರದ ಗಮನಕ್ಕೆ ತಂದು ಈಡೇರಿಸಲಾಗುವದು ಎಂದು ತಿಳಿಸಿದರು.
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾಗಿರುವ ಸಂಗತಿಗಳನ್ನು ಸಭೆಯ ಗಮನಕ್ಕೆ ತಂದರಲ್ಲದೇ ಜಿಲ್ಲೆಯ ತಾಲೂಕು ಸಂಘಗಳ ಬ್ಯಾಂಕ್ ಖಾತೆ ಹಾಗೂ ಅಡಿಟ್ ಮಾಡಿಸುವ ಕುರಿತು ಮಾಹಿತಿ ನೀಡಿದರು.
ಗದಗ ಸರಕಾರಿ ನೌಕರ ಸಂಘದ ಗೌರವಾಧ್ಯಕ್ಷ ಡಿ.ಎಸ್. ತಳವಾರ ಮಾತನಾಡಿ, ರಾಜ್ಯ ಸರಕಾರಿ ನೌಕರ ಸಂಘದ ಉದ್ದೇಶಗಳು ಹಾಗೂ ನೌಕರರ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಸಿದ್ದಣ್ಣ ಲಿಂಗದಾಳ, ತಾಲೂಕಾಧ್ಯಕ್ಷ ದಾನಪ್ಪಗೌಡ, ಶಿವಪ್ಪ ಹದ್ಲಿ, ಹಿರೇಮಠ, ದುರಗಣ್ಣವರ, ಕೊಪ್ಪದ, ಅಜಯ ಕಲಾಲ ಸೇರಿದಂತೆ ಹಲವರಿದ್ದರು. ಸಂಘದ ಪದಾಧಿಕಾರಿ ಮುತ್ತು ಮಲಕಶೆಟ್ಟಿ ನಿರೂಪಿಸಿದರು, ರಾಜು ಕಂಟೆಗೊಣ್ಣವರ ವಂದಿಸಿದರು.