ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳು ಬಾಲ್ಯದಲ್ಲಿಯೇ ಸಾಹಿತ್ಯಾಭಿರುಚಿಯೊಂದಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಅಂಕ ಗಳಿಕೆಯ ಭರಾಟೆಯಲ್ಲಿ ಇಂದು ಮಕ್ಕಳು ಕತೆ ಕೇಳುವ, ಕಾವ್ಯವನ್ನು ಆಸ್ವಾದಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಬಾಲ್ಯ ಸುಂದರವಾಗಿದ್ದರೆ ಮಾತ್ರ ಬದುಕು ಸುಂದರವಾಗಿರುತ್ತದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಯಲ್ಲಪ್ಪ ಹಂದ್ರಾಳ ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಷ್ಠಾನದ ಸಹಯೋಗದಲ್ಲಿ ಜರುಗಿದ ಎರಡು ದಿನಗಳ ಕತೆ ಹಾಗೂ ಕಾವ್ಯ ರಚನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಸಾಹಿತ್ಯದ ಬಗ್ಗೆ ವಿದ್ಯಾರ್ಥಿ ದಿಸೆಯಲ್ಲಿಯೇ ಆಸಕ್ತಿ ಮೂಡಿಸಿಕೊಂಡರೆ ಬರಹಗಾರರಾಗುವದಲ್ಲದೇ ಉತ್ತಮ ಓದುಗರಾಗಲು ಸಾಧ್ಯವಾಗುತ್ತದೆ. ಇದರಿಂದ ಭಾಷೆ, ಸಂಸ್ಕೃತಿಯ ಸಂವರ್ಧನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ಓದುವ ಸಂಸ್ಕೃತಿಯಿಂದ ವಿಮುಖರಾಗುತ್ತಿರುವ ಇಂದಿನ ವಿದ್ಯಾರ್ಥಿಗಳಿಗೆ ಸಾಹಿತ್ಯಾಭಿರುಚಿಯನ್ನು ಬೆಳೆಸುವ ನಮ್ಮ ಆದ್ಯತೆಯಾಗಬೇಕು. ಈ ದಿಸೆಯಲ್ಲಿಯೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಪ್ರತಿಷ್ಠಾನ ಮಾಡಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ವಿಶಿಷ್ಠವಾದ ಸಾಮರ್ಥ್ಯವಿರುತ್ತದೆ. ಅದಕ್ಕೆ ಅವಕಾಶ ದೊರೆಯಬೇಕು. ಈ ದಿಸೆಯಲ್ಲಿ ಪರಿಷತ್ತು ಕಮ್ಮಟಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿ ದಿಸೆಯಲ್ಲಿಯೇ ಸಾಹಿತ್ತಿಕ ಒಲವನ್ನು ಬೆಳೆಸಲು ಪ್ರಯತ್ನಿಸುತ್ತಿದೆ ಎಂದರು.
ವೇದಿಕೆಯ ಮೇಲೆ ಡಾ. ಜಿ.ಬಿ. ಪಾಟೀಲ, ಸಂಪನ್ಮೂಲ ವ್ಯಕ್ತಿಗಳಾದ ಡಾ. ವಿನಾಯಕ ಕಮತದ, ಬಸವರಾಜ ನೆಲಜೇರಿ, ಸಿದ್ಧಯ್ಯ ಮಠಪತಿ, ಭುವನಾ ಅಂಗಡಿ, ಶಿಲ್ಪಾ ಹಳ್ಳಿಕೇರಿ, ಗುರುರಾಜ ಅಣ್ಣಿಗೇರಿ, ಮಂಜುಳಾ ತುಮ್ಮರಮಟ್ಟಿ ಉಪಸ್ಥಿತರಿದ್ದರು. ಹರ್ಷಿತಾ ಉಮಚಗಿ ಪ್ರಾರ್ಥಿಸಿದರು. ಡಿ.ಎಸ್. ಬಾಪುರಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡ ನಿರೂಪಿಸಿದರು. ಅಮರೇಶ ರಾಂಪೂರ ವಂದಿಸಿದರು.