ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳ ಬುದ್ಧಿಮಟ್ಟ ಅರಿತು ಸೂಕ್ತ ಮಾರ್ಗದರ್ಶನ ನೀಡಿದಾಗ ಫಲಿತಾಂಶ ಸುಧಾರಣೆ ಮಾಡಲು ಸಾಧ್ಯ ಎಂದು ಪ.ಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗ ಬಂಡು ಮಸನಾಯಕ್ ಹೇಳಿದರು.
ಅವರು ಮಂಗಳವಾರ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆರ್ಥಿಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಉಪನಿರ್ದೇಶಕರ ಕಚೇರಿ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಅರ್ಥಶಾಸ್ತ್ರ ವಿಷಯದ ಉಪನ್ಯಾಸಕರಿಗೆ ಆಯೋಜಿಸಿದ್ದ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರ ಹಾಗೂ ಸಾಧಕರಿಗೆ ಮತ್ತು ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಇಂತಹ ಕಾರ್ಯಾಗಾರ ಅವಶ್ಯವಾಗಿದೆ. ಕಾರ್ಯಾಗಾರದ ಮೂಲಕ ನ್ಯೂನ್ಯತೆಗಳನ್ನು ಪತ್ತೆ ಹಚ್ಚಿ, ಅವುಗಳನ್ನು ನಿವಾರಣೆ ಮಾಡಿ, ಗುರಿ ಸಾಧಿಸಲು ಹಿರಿಯ ಉಪನ್ಯಾಸಕರ ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಅಂದಾಗ ಫಲಿತಾಂಶ ಸುಧಾರಣೆ ಮಾಡಲು ಸಹಾಯಕವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಾಧ್ಯಕ್ಷ ವ್ಹಿ.ಎಸ್. ದಲಾಲಿ, ಫಲಿತಾಂಶ ಸುಧಾರಣೆಗಾಗಿ ಪ್ರತಿವರ್ಷ ಇಂತಹ ಕಾರ್ಯಗಳನ್ನು ಹಮ್ಮಿಕೊಂಡು, ಸತತ ಪ್ರಯತ್ನದೊಂದಿಗೆ ಸುಧಾರಣೆ ಮಾಡಲಾಗುತ್ತಿದೆ. ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಹಿರಿಯ ಉಪನ್ಯಾಸಕ ಎನ್.ಜಿ. ಇಬ್ರಾಹಿಂಕಲೀಲುಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.
ಅರ್ಥಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಹಾಗೂ ನಿವೃತ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಎಚ್.ಎಸ್. ಕಿಂದ್ರಿ, ವಾಯ್.ಸಿ. ಪಾಟೀಲ, ಪ್ರಾ. ಎಮ್.ಸಿ. ಕಟ್ಟಿಮನಿ, ಪ್ರಾ. ಎಸ್.ಎಸ್. ಸೋಮಣ್ಣವರ, ಬಿ.ಎಸ್. ಮಲ್ಲಾಪೂರ ಸೇರಿದಂತೆ ಪ.ಪೂ ಕಾಲೇಜಗಳ ಪ್ರಾಚಾರ್ಯರ ಸಂಘದ ಹಾಗೂ ಪ.ಪೂ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಆರ್ಥಿಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಎಸ್.ಎಸ್. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಆರಂಭ ಪೂರ್ವದ ಫಲಿತಾಂಶ, ಸಂಘದ ಕಾರ್ಯಚಟುವಟಿಕೆಗಳಿಂದಾಗಿ ಫಲಿತಾಂಶ ಸುಧಾರಣೆಯಾಗಿದೆ. ಅರ್ಥಚೇತನ ಪುಸ್ತಕದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ದೇಶದ ಆರ್ಥಿಕತೆ ಹೆಚ್ಚಿಸಲು ಸಾಕಷ್ಟು ಅಧ್ಯಯನ ಮಾಡಿ, ಆರ್ಥಿಕ ಲೇಖನಗಳನ್ನು ಬರೆಯುವ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆರ್ಥಿಕ ವಿಚಾರಗಳನ್ನು ಹಂಚಿಕೊಳ್ಳಬೇಕೆAದು ಹೇಳಿದರು.