ವಿಜಯಸಾಕ್ಷಿ ಸುದ್ದಿ, ಗದಗ : ಮಾನವ ಸಂಕುಲದ ಉಳಿವಿಗಾಗಿ ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸಂರಕ್ಷಿಸುವುದು ಅನಿವಾರ್ಯವಾಗಿದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ ಅಭಿಪ್ರಾಯಪಟ್ಟರು.
ನರಗುಂದ ತಾಲೂಕಿನ ಕನಕೀಕೊಪ್ಪ ಗ್ರಾ.ಪಂ ವ್ಯಾಪ್ತಿಯ ಗುರ್ಲಕಟ್ಟಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನರೇಗಾ ಯೋಜನೆಯ ಅಮೃತ ಸರೋವರ ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಿದ ಗ್ರಾಮದ ಕೆರೆಯ ಬಳಿ ಹಮ್ಮಿಕೊಂಡ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೂನ್ 5 ಒಂದೇ ದಿನ ಪರಿಸರ ದಿನಾಚರಣೆ ಕಾರ್ಯಕ್ರಮ, ಜಾಗೃತಿ ಆಗಬಾರದು. ನಾವೆಲ್ಲ ಸೇರಿ ವಿವಿಧ ಸಸಿಗಳನ್ನು ನಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ನೆಟ್ಟು ರಕ್ಷಿಸುವುದರ ಮೂಲಕ ವರ್ಷವಿಡೀ ಪರಿಸರ ದಿನಾಚರಣೆ ನಡೆಸುವಂತಾಗಬೇಕು. ಪರಿಸರ ಸಂರಕ್ಷಣೆಯಿಂದ ವ್ಯತ್ಯಾಸವಾಗುತ್ತಿರುವ ವಾತಾವರಣವನ್ನು ಸಮತೋಲನಗೊಳಿಸಬಹುದು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡಾ ಪರಿಸರ ರಕ್ಷಣೆ ಬಗ್ಗೆ ಕಾಳಜಿವಹಿಸಬೇಕು ಎಂದರು.
ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಕೃಷ್ಣಮ್ಮ ಹಾದಿಮನಿ ಮಾತನಾಡಿ, ಪರಿಸರ ಸಂರಕ್ಷಣೆಯಾದಾಗ ಮಾತ್ರ ಮಳೆ-ಬೆಳೆ ಎಲ್ಲವೂ ಸಾಧ್ಯ. ಸುತ್ತಮುತ್ತಲಿನ ಗಿಡಗಳನ್ನು ಕಡಿದು ಹಾಕುವುದರಿಂದ ನಮ್ಮ ಪರಿಸರವನ್ನು ನಾವೇ ಹಾಳು ಮಾಡಿಕೊಂಡಂತೆ. ಹೀಗಾಗಿ ಮನೆ ಸುತ್ತ-ಮುತ್ತ ಖಾಲಿಯಿರುವ ಸ್ಥಳದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಉಳಿಸೋಣ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ನರೇಗಾ ಸಿಬ್ಬಂದಿ ಸುರೇಶ್ ಬಾಳಿಕಾಯಿ, ಅಲ್ತಾಫ್ ಅಮ್ಮೀನಬಾವಿ, ಬಸವರಾಜ ಚಿಮ್ಮನಕಟ್ಟಿ, ಗ್ರಾಮದ ನರೇಗಾ ಕೂಲಿಕಾರರು ಮತ್ತು ಕಣಕೀಕೊಪ್ಪ ಗ್ರಾ.ಪಂ ಸಿಬ್ಬಂದಿ ವರ್ಗದವರು ಹಾಜರಿದ್ದರು.