ಬೆಂಗಳೂರು: ರಾಜಧಾನಿ ಬೆಂಗಳೂರಿನ ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 1ರಂದು ಕರಗ ಮಹೋತ್ಸವವನ್ನು ಆಚರಿಸಲು ಮುಜರಾಯಿ ಇಲಾಖೆ, ಧರ್ಮರಾಯ ಸ್ವಾಮಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ.
11 ದಿನಗಳ ಕಾಲ ನಡೆಯುವ ಕರಗ ಉತ್ಸವಕ್ಕೆ ಮಾರ್ಚ್ 24ರಂದು ಧ್ವಜಾರೋಹಣದ ಮೂಲಕ ಚಾಲನೆ ಸಿಗಲಿದೆ. ಮಾರ್ಚ್ 30ರಂದು ಹಸಿ ಕರಗ ನಡೆಯಲಿದ್ದು, ಏಪ್ರಿಲ್ 1ರಂದು ಮುಖ್ಯ ಶಕ್ತ್ಯೋತ್ಸವ ಜರುಗಲಿದೆ.
ಈ ಬಾರಿಯ ಕರಗ ಮಹೋತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿ ಅದ್ಧೂರಿಯಾಗಿ ನಡೆಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಅನುದಾನ ಬಿಡುಗಡೆ ಹಾಗೂ ಟೆಂಡರ್ ಪ್ರಕ್ರಿಯೆಯ ಜವಾಬ್ದಾರಿಯನ್ನು ಜಿಬಿಎಗೆ ವಹಿಸಲಾಗುತ್ತಿದ್ದು, ದೇವಸ್ಥಾನದ ಒಳಾಂಗಣ ಸಿದ್ಧತೆಯನ್ನು ಮುಜರಾಯಿ ಇಲಾಖೆ ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ದೇವಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕವೂ ನಡೆದಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೂ ಚಿಂತನೆ ನಡೆಯುತ್ತಿದೆ. ಈ ಬಾರಿ ವಿಶೇಷ ಕರಗ ಆಚರಣೆ ಮಾಡಲು ವ್ಯವಸ್ಥಾಪನಾ ಸಮಿತಿ ತೀರ್ಮಾನಿಸಿದೆ.
ಏಪ್ರಿಲ್ 1ರಂದು ನಡೆಯಲಿರುವ ಶಕ್ತ್ಯೋತ್ಸವದಲ್ಲಿ ಎ. ಜ್ಞಾನೇಂದ್ರ ಸ್ವಾಮಿ ಕರಗ ಹೊರಲಿದ್ದಾರೆ. ಕಳೆದ ವರ್ಷ 15ನೇ ಬಾರಿ ಯಶಸ್ವಿಯಾಗಿ ಕರಗ ಹೊತ್ತಿದ್ದ ಅವರು, ಈ ಬಾರಿ 16ನೇ ಬಾರಿ ಕರಗ ಹೊರುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲಿದ್ದಾರೆ.



