ವಿಜಯಸಾಕ್ಷಿ ಸುದ್ದಿ, ಗದಗ : ದಾನಗಳಲ್ಲಿಯೇ ಅಂಗಾಂಗ ದಾನ ಅತ್ಯಂತ ಪವಿತ್ರವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಐಎಂಎ, ಜಿಮ್ಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಯನ್ಸ್ ಕ್ಲಬ್ ಹಾಗೂ ನಗರದ ವಿವಿಧ ಆಸ್ಪತ್ರೆಗಳ ಸಹಯೋಗದಲ್ಲಿ ವಿಶ್ವ ಅಂಗಾಂಗ ದಿನಾಚರಣೆ ನಿಮಿತ್ತ ಕಾಲ್ನಡಿಗೆ ಹಾಗೂ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗದಗ-ಬೆಟಗೇರಿ ಅವಳಿ ನಗರದಲ್ಲಿ ವೈದ್ಯರೆಲ್ಲರೂ ಕೂಡಿ ವಿಶ್ವ ಅಂಗದಾನ ದಿನ ಆಚರಿಸುವ ಮೂಲಕ ಜಾಗೃತಿ ಮೂಡಿಸುತ್ತಿರುವುದು ಸಂತಸದ ವಿಷಯ. ಅಂಗಾಂಗ ದಾನ ವಿಷಯದ ಕುರಿತು ಉದಾತ್ತ ಉದ್ದೇಶವನ್ನಿಟ್ಟುಕೊಂಡು ಮಾಡುತ್ತಿರುವ ನಿಮ್ಮ ಪರಿಶ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಜಿಲ್ಲೆ, ರಾಜ್ಯ ಸೇರಿ ದೇಶದಲ್ಲಿ ಅಂಗಾಂಗಗಳ ಅಗತ್ಯ ಇದ್ದೇ ಇದೆ. ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕಳೆದ 25 ವರ್ಷಗಳ ಹಿಂದೆ ರಕ್ತದಾನಕ್ಕೂ ಕೊರತೆಯಾಗುವಂತಹ ಪರಿಸ್ಥಿತಿ ಇತ್ತು. ಸದ್ಯ ಜನರು ಜಾಗೃತರಾಗಿದ್ದು, ಇಂದು ರಕ್ತದಾನ ಶಿಬಿರ ಸೇರಿ ರಕ್ತ ಭಂಡಾರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಕ್ತದಾನ ಮಾಡುತ್ತಿದ್ದಾರೆ ಎಂದರು.
ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದ ಸಚಿವರು ವೈದ್ಯರು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಕಾಲ್ನಡಿಗೆಯಲ್ಲಿ ಪಾಲ್ಗೊಂಡರು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಡಿಎಚ್ಒ ಡಾ. ಎಸ್.ಎಸ್. ನೀಲಗುಂದ, ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಡಾ. ಅವಿನಾಶ ಓದುಗೌಡರ ಸೇರಿ ನಗರದ ಎಲ್ಲ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು, ಅವಳಿ ನಗರದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ರಕ್ತದಾನದ ಹಾಗೆಯೇ ಅಂಗಾಂಗ ದಾನ ಅತ್ಯಂತ ಪವಿತ್ರ ದಾನಗಳಲ್ಲೊಂದಾಗಿದೆ. ಅದನ್ನು ಜಾಗೃತಿಗೊಳಿಸಲು ಯುವಕರನ್ನು ಒಟ್ಟುಗೂಡಿಸಿರುವುದು ಸಂತಸದ ವಿಷಯ. ಇಲ್ಲಿ ಸೇರಿರುವ ಎಲ್ಲರೂ ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರಿಗೆ ಅಂಗಾಂಗ ಜೋಡಣೆಗೆ ಅನುಕೂಲವಾಗುವಂತೆ ಅಂಗಾಂಗ ದಾನಕ್ಕೆ ಪ್ರೇರೇಪಿಸುವ ಕೆಲಸವಾಗಬೇಕು ಎಂದು ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.