ವಿಜಯಸಾಕ್ಷಿ ಸುದ್ದಿ, ಗದಗ: ಪರೀಕ್ಷೆ ಎಂಬುವುದು ಭಯವಲ್ಲ, ಅದೊಂದು ಮೌಲ್ಯಮಾಪನ. ನಿಮ್ಮ ಆತ್ಮಶಕ್ತಿ ಮತ್ತು ಧೈರ್ಯವನ್ನು ಹೆಚ್ಚಿಸುವ ಸಾಧನವಾಗಿದೆ. ನಿಮ್ಮ ಮನೋಬಲದ ಶಕ್ತಿಯೂ ಆಗಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರನ್ನಾಗಿಸುತ್ತದೆ. ತೇರ್ಗಡೆ ಹೊಂದಿ ಮುಂದಿನ ತರಗತಿಯನ್ನು ಪ್ರವೇಶಿಸಲೂ ಅಗತ್ಯವಾಗಿದೆ ಮತ್ತು ಹೆಚ್ಚಿನ ಓದಿಗಾಗಿ ನಿಮಗೆ ಅನುಕೂಲವಾಗಲಿದೆ. ಮನುಷ್ಯನ ಪ್ರತಿ ಹಂತದಲ್ಲಿ ಸೋಲು-ಗೆಲುವು, ಪಾಸು-ಫೇಲು ಇರುವುದು ಸಹಜ. ನಿಮ್ಮ ಶ್ರಮಕ್ಕೆ ಬರುವ ಫಲವು ಯಾವುದೇ ಆಗಿರಲಿ ಸ್ವೀಕರಿಸುವ ಮನೋಭಾವ ನಿಮ್ಮಲ್ಲಿ ಇರಬೇಕು. ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ ಎಂದು ಕಪ್ಪತ್ತಗಿರಿ ಫೌಂಡೇಶನ್ನ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಎಂ.ಇಟಗಿಮಠ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.
ಶಿಕ್ಷಕರು ನಿಮ್ಮ ಮೇಲಿಟ್ಟ ಭರವಸೆಯನ್ನು ಹುಸಿಯಾಗಿಸಬೇಡಿ, ಹೆತ್ತವರು ನಿಮ್ಮ ಮೇಲಿಟ್ಟ ನೀರೀಕ್ಷೆಯನ್ನು ನಿರಾಸೆಗೊಳಿಸಬೇಡಿ. ನಿರಂತರ ಓದು-ಬರಹ ನಿಮ್ಮ ಭಯವನ್ನು ಕೊಲ್ಲುವ ಆಯುಧವಾಗಿದೆ. ಫಲಿತಾಂಶ ಏನೇ ಬಂದರೂ ಸಮನಾಗಿ ಸ್ವೀಕರಿಸುವ ಮನೋಭಾವ ಇರಲಿ, ಪರೀಕ್ಷೆ ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿದೆ ನಿಮಗೆಲ್ಲರಿಗೂ ಒಳಿತಾಗಲಿ ಎಂದು ಅವರು ಹಾರೈಸಿದ್ದಾರೆ.