ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ಮೆಕ್ಕೆಕಟ್ಟು ಮೇಳ ಕಳೆದ ವರ್ಷ ನಿರೀಕ್ಷೆಗೂ ಮೀರಿ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ಕ್ಷಿಪ್ರ ಕ್ರಾಂತಿಯನ್ನು ಮೆರೆದು, ಯುವ ಪೀಳಿಗೆಯಲ್ಲಿ ಯಕ್ಷಗಾನದ ಆಸಕ್ತಿಯನ್ನು ಹೆಚ್ಚಿಸಿದ್ದಾರೆಂದು ಗದಗ-ಬೆಟಗೇರಿ ಹೊಟೇಲ್ ಒಡೆಯರ ಸಂಘದ ಅದ್ಯಕ್ಷ ವಿಶ್ವನಾಥಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ವೀರನಾರಾಯಣ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸಂಜೆ ಗದಗ-ಬೆಟಗೇರಿ ಹೊಟೇಲ್ ಒಡೆಯರ ಸಂಘ ಏರ್ಪಡಿಸಿದ್ದ ಶ್ರೀ ಮೆಕ್ಕೆಕಟ್ಟು ಮೇಳದ ‘ಕವಿರತ್ನ ಕಾಳಿದಾಸ’ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರಾಣಿಕ ಕಥೆಗಳನ್ನು ಆಧರಿಸಿ ಯಕ್ಷಗಾನದ ಮೂಲಕ ಜನರಲ್ಲಿ ಪ್ರಾಯೋಗಿಕವಾಗಿ ಐತಿಹಾಸಿಕ ಘಟನಾವಳಿಗಳನ್ನು ಬಿತ್ತರಿಸುವ ಯಕ್ಷಗಾನ ಕೌಶಲ್ಯ ಇಂದಿನ ಪ್ರಮುಖ ಮಾಧ್ಯಮವಾಗಿದೆ. ಉತ್ತರ ಕರ್ನಾಟಕದ ಜನರಲ್ಲಿ ಯಕ್ಷಗಾನದ ಮಹತ್ವ, ಪ್ರಾಮುಖ್ಯತೆ ಮತ್ತು ಆಸಕ್ತಿ ಬಿತ್ತರಿಸುವ ಪ್ರಮುಖ ಉದ್ದೇಶದಿಂದಾಗಿಯೇ ಶ್ರೀ ಮೆಕ್ಕೆಕಟ್ಟು ಮೇಳವನ್ನು ಆಹ್ವಾನಿಸಲಾಗಿದೆ. ಈ ಭಾಗದ ಜನರಲ್ಲಿ ಯಕ್ಷಗಾನದ ರತಸದೌತಣವನ್ನು ಉಣಬಡಿಸುವ ಉದ್ದೇಶದಿಂದ ಪ್ರತಿ ವರ್ಷ ಯಕ್ಷಗಾನ ಪ್ರದರ್ಶನ ನೆರವೇರಿಸುತ್ತಿದ್ದೇವೆ. ನಮ್ಮ ತವರಿನ ಯಕ್ಷಗಾನದ ಅಭಿರುಚಿ ಸವಿಯುವ ಉದ್ದೇಶ ನಮ್ಮದಾಗಿದ್ದು, ನಮ್ಮ ಆಸೆ, ಆಕಾಂಕ್ಷೆ ಈಡೇರಿಕೆಗಾಗಿ ಯಕ್ಷಗಾನ ಪ್ರದರ್ಶನವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಸಂತೃಪ್ತಿ ನಮಗಿದೆ ಎಂದರು.
ಈ ಸಂದರ್ಭದಲ್ಲಿ ಮೇಳದ ಮುಖ್ಯಸ್ಥರಾದ ರಂಜಿತಶೆಟ್ಟಿ, ಉಪಾಧ್ಯಕ್ಷರಾದ ಸುಧಾಕರಶೆಟ್ಟಿ, ಜಯಪಾಲಶೆಟ್ಟಿ, ಉದಯಶೆಟ್ಟಿ, ಪುರುಷೋತ್ತಮ ಹೆಗಡೆ, ಕಾವೆಂಶ್ರೀ, ಸತೀಶ ಶೆಟ್ಟಿ, ರಣಜಿತಶೆಟ್ಟಿ, ಜಯದೇವ ಭಟ್ಟ, ಸುಧೀರ ಶೆಟ್ಟಿ, ರಾಜು ಪೂಜಾರಿ, ಯುವ ಗಣ್ಯ ಉದ್ಯಮಿ ಶಂಕರ ಮುಳಗುಂದ ಸೇರಿದಂತೆ ಹಲವರಿದ್ದರು. ಇದೇ ಸಂದರ್ಭದಲ್ಲಿ ಜಲವಳ್ಳಿ ವಿದ್ಯಾಧರ ರಾವ್ ಅವರನ್ನು ಗದಗ ಹೊಟೇಲ್ ಒಡೆಯರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾವೆಂಶ್ರೀ ಕಾರ್ಯಕ್ರಮ ನಿರೂಪಿಸಿದರು. ಪುರುಷೋತ್ತಮ ಹೆಗಡೆ ವಂದಿಸಿದರು.