ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರ ನಿವೇಶನ ವಿವಾದ ಇದೀಗ ಕೇವಲ ಭೂಮಿ ಸಂಬಂಧದ ಜಗಳವಲ್ಲ, ಸಂಘಟಿತ ದಂಧೆಯ ಆರೋಪದ ಹಂತಕ್ಕೆ ತಲುಪಿದೆ. ಈ ಪ್ರಕರಣದಲ್ಲಿ ಇದೀಗ ಮೂಲ ಮಾಲಕಿ ಎನ್ನಲಾದ ಲಕ್ಷ್ಮಮ್ಮ ಅವರು ಪ್ರತ್ಯಕ್ಷರಾಗಿದ್ದು, ವಿವಾದಕ್ಕೆ ಮತ್ತಷ್ಟು ಕಾವು ತಂದಿದ್ದಾರೆ.
ಲಕ್ಷ್ಮಮ್ಮ ಅವರು, “ಪುಷ್ಪಾ ಅವರ ಜಾಗ ಬೇರೆ ಕಡೆ ಇದೆ. ನಮ್ಮ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಲಾಗಿತ್ತು. ಅದನ್ನು ನಾವು ತೆಗೆಸಿದ್ದೇವೆ” ಎಂದು ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ವಾಸವಾಗಿರುವ 93 ವರ್ಷದ ಲಕ್ಷ್ಮಮ್ಮ, ಹಾಸನಕ್ಕೆ ಬರಲು ತೊಂದರೆಯಿರುವುದರಿಂದ ದೇವರಾಜ್ ಅವರನ್ನು ಜಿಪಿಎ ಹೋಲ್ಡರ್ ಆಗಿ ನೇಮಿಸಿದ್ದಾಗಿ ತಿಳಿಸಿದ್ದಾರೆ.
ಆದರೆ ಈ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಪುಷ್ಪಾ ಅರುಣ್ ಕುಮಾರ್, “ಲಕ್ಷ್ಮಮ್ಮ ಅವರಿಂದ ಜಾಗ ವರ್ಗಾವಣೆ ಆಗಿ 45 ವರ್ಷಗಳಾಗಿವೆ. ಈಗ ಟಿವಿಯಲ್ಲಿ ಅವರನ್ನು ನೋಡುತ್ತಿದ್ದೇನೆ. ಖಾತೆ ನನ್ನ ಹೆಸರಿನಲ್ಲಿ ಇದೆ, ಕಂದಾಯ ನಾನು ಕಟ್ಟುತ್ತಿದ್ದೇನೆ. ಅವರ ಹೆಸರಿನಲ್ಲಿ ಯಾಕೆ ಕಂದಾಯ ದಾಖಲೆ ಇಲ್ಲ?” ಎಂದು ಪ್ರಶ್ನಿಸಿದ್ದಾರೆ.
ಇದಲ್ಲದೆ, “ಹಾಸನದಲ್ಲಿ ಈ ರೀತಿ ದಂಧೆ ನಡೆಯುತ್ತಿದೆ. ಹಿಂದಿನ ಎರಡು ಸೈಟ್ಗಳಲ್ಲೂ ಇದೇ ಮಾದರಿಯ ಪ್ರಯತ್ನ ನಡೆದಿದೆ. ಸತೀಶ್ ಪಟೇಲ್, ಲಾಯರ್ ಶೇಖರ್, ಡಿಪಿಒ ನಟರಾಜ್, ದೇವರಾಜೇಗೌಡ ಸೇರಿ ಈ ದಂಧೆ ನಡೆಸುತ್ತಿದ್ದಾರೆ. ಅನೇಕ ಜನರಿಗೆ ಇದೇ ರೀತಿ ತೊಂದರೆ ಕೊಟ್ಟಿದ್ದಾರೆ ಎಂಬ ಮಾಹಿತಿ ನನಗೆ ಬರುತ್ತಿದೆ” ಎಂದು ಪುಷ್ಪಾ ಗಂಭೀರ ಆರೋಪ ಮಾಡಿದ್ದಾರೆ.
ಸರ್ಕಾರ ಮೋಸ ಮಾಡಿದ್ದರೆ ಸರ್ಕಾರವನ್ನು ಪ್ರಶ್ನಿಸಬೇಕು, ನಮ್ಮ ಮೇಲೆ ಫೈಟ್ ಮಾಡೋದಲ್ಲ ಎಂದು ಸ್ಪಷ್ಟಪಡಿಸಿರುವ ಅವರು, “ನಾನು 2020ಕ್ಕೂ ಮುಂಚೆಯೇ ಈ ನಿವೇಶನ ಖರೀದಿಸಿದ್ದೇನೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದೇನೆ” ಎಂದಿದ್ದಾರೆ.
ಇನ್ನೂ, “ದೇವರಾಜ್ ಮತ್ತು ಸತೀಶ್ ಅವರು ಹೆಣ್ಮಕ್ಕಳ ಬಗ್ಗೆ ಹೀನಾಯವಾಗಿ ಮಾತನಾಡಿದ್ದಾರೆ. ಈ ಕುರಿತು ಮಹಿಳಾ ಆಯೋಗಕ್ಕೆ ದೂರು ನೀಡುತ್ತೇನೆ” ಎಂದು ಪುಷ್ಪಾ ಅರುಣ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ಕಾನೂನು ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.



