ಬಳ್ಳಾರಿ: ಯತ್ನಾಳ್ ಕಟ್ಟಾ ಹಿಂದುತ್ವವಾದಿ, ಹೀಗಾಗಿ ಹಿಂದುತ್ವ ವಾದಿಗಳಿಗೆ ನೋವಾಗಿರುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಕಟ್ಟಾ ಹಿಂದುತ್ವವಾದಿ, ಹೀಗಾಗಿ ಹಿಂದುತ್ವ ವಾದಿಗಳಿಗೆ ನೋವಾಗಿರುತ್ತದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷದಿಂದ ದೇಶ ದೊಡ್ಡದು. ಲಿಂಗಾಯತ ಸಮುದಾಯಕ್ಕೆ ನೋವಾಗಿದೆ.
ನನಗೂ ಅವಕಾಶ ಸಿಕ್ಕಾಗ ನಾಯಕರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆ. ಲಿಂಗಾಯತ ಸಮುದಾಯ ದೊಡ್ಡ ಸಮುದಾಯ, ಏನೇ ಆದರೂ ಇದನ್ನು ಸರಿಪಡಿಸಬೇಕು. ಈ ನಿರ್ಧಾರದಿಂದ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ. ಸಮುದಾಯಗಳನ್ನ ಒಗ್ಗೂಡಿಸಿಕೊಂಡು ಹೋಗಬೇಕು. ಉಚ್ಚಾಟನೆಯನ್ನು ಮರುಪರಿಶೀಲನೆ ಮಾಡಿದರೆ ಪಕ್ಷಕ್ಕೆ ಲಾಭ ಆಗುತ್ತದೆ ಎಂದರು.
ನಾನು ಸಾಕಷ್ಟು ಸಾರಿ ಯತ್ನಾಳ್ ಅವರಿಗೆ ಹೇಳಿದ್ದೆ. ನೀವು ನೇರ ನಿಷ್ಠುರವಾದಿ, ಹಿಂದುತ್ವವಾದಿ. ನಿಮಗೆ ತೊಂದರೆ ಆಗುತ್ತೆ ಎಂದರೆ ನೀವು ನಿಷ್ಠುರ ಆಗುತ್ತೀರಿ ಎಂದಿದ್ದೆ ಆದರೆ ಇದೀಗ ಅವರನ್ನು ಉಚ್ಚಾಟನೆ ಮಾಡಿದ್ದಾರೆ.
ಅಮಿತ್ ಶಾ, ನಡ್ಡಾ ಹಾಗೂ ಪ್ರಧಾನಿ ಮೋದಿ ಅವರು ಮರುಪರಿಶೀಲನೆ ಮಾಡಬೇಕು. ಇಡೀ ಪಂಚಮಸಾಲಿ ಸಮುದಾಯ ಬಿಜೆಪಿ ಜೊತೆಗಿದೆ. ಆ ಸಮುದಾಯಕ್ಕೆ ನೋವಾಗಬಾರದು. ಆ ಸಮುದಾಯವನ್ನು ದೂರ ಮಾಡಿಕೊಂಡ್ವಿ ಎಂದು ನೋವು ಪಡಬಾರದು. ಹೀಗಾಗಿ ಮರು ಪರಿಶೀಲನೆ ಮಾಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.