ಏಕಬೆಳೆ ಪದ್ಧತಿಯಿಂದ ಇಳುವರಿ ಕುಂಠಿತ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಏಕಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಭೂಮಿಯ ಫಲವತ್ತತೆ ಕುಂಠಿತಗೊಂಡು, ಬರುಬರುತ್ತಾ ಇಳುವರಿ ಕಡಿಮೆಯಾಗುತ್ತದೆ. ದ್ವಿದಳ ಧಾನ್ಯಗಳಾದ ತೊಗರಿ, ಕಡಲೆ ಮತ್ತು ಇನ್ನಿತರ ಬೆಳೆಗಳನ್ನು ಬೆಳೆಯುವುದರಿಂದ ವಾತಾವರಣದಲ್ಲಿರುವ ಸಾರಜನಕವು ದ್ವಿದಳ ಧಾನ್ಯಗಳ ಬೇರಿನಲ್ಲಿರುವ ರೈಜೋಬಿಯಂ ಗಂಟುಗಳ ಮುಖಾಂತರ ಸ್ಥಿರೀಕರಣಗೊಂಡು ಮಣ್ಣಿನ ಫಲವತ್ತತೆ ಹೆಚ್ಚಾಗಿ, ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಧರ್ಮಗಳು ಉತ್ತಮವಾಗುವುದರೊಂದಿಗೆ ಸಾವಯವ ಇಂಗಾಲದ ಮಟ್ಟವು ಸುಧಾರಿಸುತ್ತದೆ ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ (ವಾಲ್ಮಿ) ನಿರ್ದೇಶಕರಾದ ಡಾ. ಗಿರೀಶ ಎನ್.ಮರಡ್ಡಿ ಹೇಳಿದರು.

Advertisement

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಧಾರವಾಡ ಮತ್ತು ಆರ್ಬಿಯಾ (ನೆಟಾಫಿಮ್) ಸಂಸ್ಥೆ ಇವರ ಸಹಯೋಗದಲ್ಲಿ ಗದುಗಿನ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನಾ ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ರೈತರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಎಸ್.ಎಲ್. ಪಾಟೀಲ್, ಮಣ್ಣು ಪರೀಕ್ಷೆಯ ಮಹತ್ವದ ಬಗ್ಗೆ ತಿಳಿಸಿ, ಎರಡು ವರ್ಷಕ್ಕೆ ಒಮ್ಮೆಯಾದರೂ ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ, ಅದರ ಆಧಾರದ ಮೇಲೆ ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸಬೇಕೆಂದು ಕಿವಿಮಾತು ಹೇಳಿದರು.

ವಾಲ್ಮಿ ಸಂಸ್ಥೆಯ ಸಮಾಲೋಚಕ ಸುರೇಶ ಕುಲಕರ್ಣಿ ಮಾತನಾಡಿ, ನೀರಾವರಿ ಕಾಯ್ದೆ ಹಾಗೂ ಸಹಕಾರ ಸಂಘಗಳ ಕಾಯ್ದೆಯಡಿಯಲ್ಲಿ ರಚಿಸಿಕೊಂಡಿರುವ ನೀರು ಬಳಕೆದಾರರ ಸಹಕಾರಿ ಸಂಘಗಳನ್ನು ಬಲವರ್ಧನೆಗೊಳಿಸಬೇಕು ಎಂದು ತಿಳಿಸಿದರು.

ಆರ್ಬಿಯಾ (ನೆಟಾಫಿಮ್) ಸಂಸ್ಥೆಯ ಸಹಾಯಕ ಮಹಾಪ್ರಬಂಧಕ ಗಿರೀಶ್ ದೇಶಪಾಂಡೆ ಮಾತನಾಡುತ್ತಾ, ಸಿಂಗಟಾಲೂರು ಏತ ನೀರಾವರಿ ಯೋಜನೆಯ ಅನುಷ್ಠಾನದ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಾಲ್ಮಿ ಸಂಸ್ಥೆಯ ಸಮಾಲೋಚಕ ರಾಘವೇಂದ್ರ ತೆಗ್ಗಿ ಪಾಲ್ಗೊಂಡಿದ್ದರು. ವಾಲ್ಮಿ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ನಾಗರಾಜ ತಹಸೀಲ್ದಾರ್ ಸ್ವಾಗತಿಸಿ, ವಂದಿಸಿದರು.


Spread the love

LEAVE A REPLY

Please enter your comment!
Please enter your name here