ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣವು ವಿವೇಕಯುಕ್ತ ಧ್ಯೇಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನೆರವಾಗುವ ಉತ್ತಮ ಸಾಧನವಾಗಿದೆ. ಅದರಲ್ಲೂ ಯೋಗ ಶಿಕ್ಷಣವ ಅತ್ಯುತ್ತಮ ಸಾಧನವಾಗಿದೆ. ಈ ಸಾಧನದ ಬಳಕೆ ಇಲ್ಲದ್ದಕ್ಕೆ ಇಂದು ವಯಕ್ತಿಕ, ಕೌಟುಂಬಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಅನೇಕ ರೀತಿಯ ಸಂಘರ್ಷಗಳಿಂದ ಎಲ್ಲೆಡೆ ಶಾಂತಿ ಇಲ್ಲದಾಗಿದೆ ಎಂದು ಗದಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ ಅಭಿಪ್ರಾಯಪಟ್ಟರು.
ಇಲ್ಲಿನ ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಕೇಂದ್ರದ ಬೆಳ್ಳಿಹಬ್ಬ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ಯೋಗ ಸಾಧನೆಯಿಂದ ವ್ಯಕ್ತಿಯು ದೈಹಿಕ, ಮಾನಸಿಕ, ನೈತಿಕ, ಆಧ್ಯಾತ್ಮಿಕವಾಗಿ ಒಂದು ಶಕ್ತಿಯಾಗಿ ಬೆಳೆದು ಅವನಲ್ಲಿ ವಿವೇಕ ಮತ್ತು ಆಲೋಚನೆಗಳು ಅಂಕುರಿಸುವವು. ಸರಿ-ತಪ್ಪುಗಳ ಅರಿವು ಮೂಡಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯುತ್ತಾನೆ ಹಾಗೂ ತಾನಿರುವ ಸಮಾಜವನ್ನು ಬೆಳೆಸುತ್ತಾನೆ. ಈ ನಿಟ್ಟಿನಲ್ಲಿ ಸಂಘರ್ಷಗಳ ಶಾಂತತೆಗೆ ಯೋಗ ಶಿಕ್ಷಣ ಸಹಕಾರಿಯಾಗಿದೆ ಎಂದರು.
ದೇಶದಲ್ಲಿ ಮಹಾವಿದ್ಯಾಲಯಗಳು ಸಾವಿರಾರು ಸಂಖ್ಯೆಯಲ್ಲಿವೆ. ಇವೆಲ್ಲವುಗಳಿಗಿಂತ ಬಸವ ಯೋಗ ಮಹಾವಿದ್ಯಾಲಯ ಭಿನ್ನವಾಗಿದೆ. ಕಾರಣ ರಾಷ್ಟ್ರೋನ್ನತಿಗಾಗಿ ಸತ್ಪ್ರಜೆಗಳನ್ನು ರೂಪಿಸುವ ವಿದ್ಯಾಲಯವಾಗಿದೆ. ಬಸವ ಯೋಗ ಮಹಾವಿದ್ಯಾಲಯ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಯಶಸ್ಸು ಸಾಧಿಸಲೆಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ರೋಣದ ರಾಜೀವಗಾಂಧಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ ಪ್ರಾಚಾರ್ಯ ಡಾ. ಆಯ್.ಬಿ. ಕೊಟ್ಟೂರಶೆಟ್ಟಿ ಮಾತನಾಡಿ, ಯೋಗವು ದಿನಚರಿಯನ್ನು ಪರಿಪಾಲಿಸಲು ದೈಹಿಕ, ಮಾನಸಿಕ ಶಕ್ತಿಯನ್ನು ನೀಡುತ್ತದೆ. ವಿದ್ಯಾರ್ಥಿ ಹಂತದಿಂದಲೇ ಯೋಗ ಸಾಧನೆ ಮಾಡಿದರೆ ಅವರು ಸದಾ ನಿರೋಗಿಯಾಗಿರಲು ಸಾಧ್ಯವಾಗುವುದು. ಇಂದು ನಾವೆಲ್ಲ ಸಮಾಜೋನ್ನತಿಗಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳುವದು ಅಗತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕೆ.ಸಿ. ಪಟ್ಟಣಶೆಟ್ಟಿಯವರನ್ನು, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ನಿಂಬನಗೌಡರ, ಯೋಗ ಶಿಕ್ಷಕಿ ಸುಮಂಗಲಾ ಹದ್ಲಿ ಇವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿP್ಷÀಕರಾದ ಜಿ.ಪಿ. ಕಟ್ಟಿಮನಿ ಅನಿಸಿಕೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಗ ಪಾಠಶಾಲೆಯ ಯೋಗ ಸಾಧಕ ವೃಂದ, ಬಸವ ಯೋಗ ಕೇಂದ್ರದ ವಿದ್ಯಾರ್ಥಿ ವೃಂದ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಸುನಂದಾ ಜ್ಯಾನೋಪಂತರ ಪ್ರಾರ್ಥನೆ ಹೇಳಿದರು. ಡಾ. ಎಂ.ವಿ. ಐಹೊಳ್ಳಿ ಸ್ವಾಗತಿಸಿದರು. ಬಸವ ಯೋಗ ಕೇಂದ್ರದ ಪ್ರಾಚಾರ್ಯರಾದ ಕೆ.ಎಸ್. ಪಲ್ಲೇದ ಕಾರ್ಯಕ್ರಮ ನಿರೂಪಿಸಿದರು. ವಿಜಯಾ ಚನ್ನಶೆಟ್ಟಿ ವಂದಿಸಿದರು.