ಯೋಗವು ಉತ್ತಮ ಆರೋಗ್ಯದ ಸರಳ ಸೂತ್ರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಯೋಗವು ಮನುಷ್ಯನ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯದ ಸರಳ ಸೂತ್ರವಾಗಿದೆ. ಇಡೀ ಮನುಷ್ಯ ಜನಾಂಗದ ಏಳಿಗೆಗೆ, ಸಂತೋಷಕ್ಕೆ, ನೆಮ್ಮದಿಗೆ ತೃಪ್ತಿಗೆ ಬೇಕಾಗುವ ಬಹುದೊಡ್ಡ ಸಾಧನವೇ ಯೋಗವಿದ್ಯೆಯಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

Advertisement

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಗರಸಭೆ ಗದಗ-ಬೆಟಗೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಗುರುವಾರ ನಗರದ ಮುನ್ಸಿಪಲ್ ಆವರಣದಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಯೋಗ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಜೀವ ಜಗತ್ತಿಗೆ ಭಾರತ ದೇಶವು ನೀಡಿದ ಅತ್ಯದ್ಭುತ ಕೊಡುಗೆ `ಯೋಗ’ವಾಗಿದೆ. ಯೋಗವು ಪ್ರಾಚೀನ ಭಾರತೀಯ ತತ್ವಶಾಸ್ತ್ರವಾಗಿದ್ದು, ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಯೋಗವು ಋಷಿಮುನಿಗಳ ಕೊಡುಗೆಯಾಗಿದೆ ಎಂದು ಹೇಳಿದರು.

ನಗರದ ಮುನ್ಸಿಪಲ್ ಕಾಲೇಜು ಆವರಣದಿಂದ ಸಾಮೂಹಿಕ ಯೋಗ ನಡಿಗೆಯಲ್ಲಿ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ, ಉತ್ತಮ ಆರೋಗ್ಯಕ್ಕೆ ಸಂಜೀವಿನಿ ಯೋಗ, ಸದೃಡ ಆರೋಗಕ್ಕೆ ಯೋಗವೇ ರಾಮಬಾಣ, ಶರೀರ ಮತ್ತು ಮನಸ್ಸನ್ನು ಸದೃಡಗೊಳಿಸುವ ಏಕೈಕ ಸಾಧನ ಯೋಗ ಇತ್ಯಾದಿ ಘೋಷವಾಕ್ಯಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತ ನಗರಸಭೆ ಕಾಲೇಜು ಮೈದಾನದಿಂದ ಗಾಂಧಿ ವೃತ್ತ, ಶಹಾಪುರ್ ಪೇಟೆ, ಮಹೇಂದ್ರಕರ ವೃತ್ತ, ಹುಯಿಲಗೋಳ ನಾರಾಯಣ ರಾವ್ ವೃತ್ತ, ರೋಟರಿ ವೃತ್ತ, ಗಾಂಧಿ ವೃತ್ತದ ಮೂಲಕ ನಗರಸಭೆ ಕಾಲೇಜು ಮೈದಾನದವರೆಗೆ ಜಾಗೃತಿಗಾಗಿ ಯೋಗ ನಡಿಗೆ ಮುಕ್ತಾಯಗೊಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಆಯುಷ್ ಇಲಾಖೆಯ ಜಯಪಾಲಸಿಂಗ ಪಿ.ಸಮೋರೆಕರ, ತಾಲೂಕು ಗ್ಯಾರಂಟಿ ಯೊಜನೇಯ ತಾಲೂಕು ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯ ಕೃಷ್ಣಗೌಡ ಪಾಟೀಲ, ಯೋಗ ಪರಿಣಿತರು, ಡಿಜಿಎಮ್ ಆಯುರ್ವೇದಿಕ್ ಕಾಲೇಜು ವಿದ್ಯಾರ್ಥಿಗಳು, ರೋಣದ ಡಿ.ಜಿ.ಎಮ್ ಕಾಲೇಜಿನ ಬಿ.ಎ.ಎಮ್.ಎಸ್ ವಿದ್ಯಾರ್ಥಿಗಳು, ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ-ಕಾಲೇಜು ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.

2015ರಿಂದ ಭಾರತ ಸರಕಾರವು ಯೋಗವನ್ನು ಇಡೀ ಜಗತ್ತಿಗೆ ಯೋಗ ದಿನಾಚರಣೆಯ ಮೂಲಕ ಪರಿಚಯಿಸಿದೆ. ಪತಂಜಲಿ ಮಹರ್ಷಿಗಳನ್ನು ಯೋಗದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಅವರು ಯೋಗ ಸೂತ್ರಗಳನ್ನು ರಚಿಸಿದರು. ಯೋಗದಿಂದ ಮನಸ್ಸಿನ ಕಲ್ಮಶಗಳನ್ನು, ಪದಗಳಿಂದ ಭಾಷೆಯ ದೋಷಗಳನ್ನು ಮತ್ತು ವೈದ್ಯಕೀಯದಿಂದ ಶರೀರದ ದೋಷಗಳನ್ನು ನಿವಾರಿಸಿದೆ ಎಂದು ವಿ.ಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.


Spread the love

LEAVE A REPLY

Please enter your comment!
Please enter your name here