ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯೋಗವು ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿದೆ. ಅದರ ಪ್ರಾಮುಖ್ಯತೆಯನ್ನು ನಮ್ಮ ಧರ್ಮಗ್ರಂಥಗಳಲ್ಲಿ ಉತ್ತಮವಾಗಿ ದಾಖಲಿಸಲಾಗಿದೆ ಮತ್ತು ಈಗ ವಿಶ್ವಾದ್ಯಂತ ಗುರುತಿಸಲ್ಪಟ್ಟಿದೆ. ಯೋಗವು ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸುವ ಸಮಗ್ರ ಅಭ್ಯಾಸವಾಗಿದೆ ಎಂದು ತಹಸೀಲ್ದಾರ ವಾಸುದೇವ ವಿ.ಸ್ವಾಮಿ ಹೇಳಿದರು.
ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ತೋಂಟದೇವರಮಠದ ಆವರಣದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾ.ಪಂ ಇಓ ಕೃಷ್ಣಪ್ಪ ಧರ್ಮರ ಮಾತನಾಡಿ, ಜಗತ್ತಿಗೆ ಭಾರತವು ನೀಡಿದ ಶ್ರೇಷ್ಠ ಕೊಡುಗೆಗಳಲ್ಲಿ ಯೋಗವು ಕೂಡ ಒಂದು. ಇಂದು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಯೋಗವನ್ನು ಆರೋಗ್ಯ ಜೀವನದ ಅವಿಭಾಜ್ಯ ಭಾಗವಾಗಿ ನೋಡಲಾಗುತ್ತಿದೆ. ಯೋಗದ ತವರು ನೆಲವಾಗಿರುವ ಭಾರತದಲ್ಲಿ ಯೋಗದ ಮಹತ್ವವನ್ನು ನಾವೆಲ್ಲ ಅರಿತು ಆಚರಿಸಬೇಕಾಗಿದೆ. ಮಾನಸಿಕ ಒತ್ತಡ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕೆ ಯೋಗದ ಮೊರೆ ಹೋಗುತ್ತಿದ್ದಾರೆ. ವಿಶ್ವ ಯೋಗ ದಿನಾಚರಣೆಯಂದು ಮಾತ್ರ ನಾವು ಯೋಗಕ್ಕಾಗಿ ಮೀಸಲಿಡದೆ ನಿತ್ಯ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಆರೋಗ್ಯ ಪಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಸುವರ್ಣಬಾಯಿ ಬಹದ್ದೂರದೇಸಾಯಿ ವಹಿಸಿದ್ದರು. ಮುಖ್ಯೋಪಾಧ್ಯಾಯ ಜೆ.ಡಿ. ಲಮಾಣಿ, ಎಸ್.ಜಿ. ಹೂವಿನ, ಸಿಆರ್ಪಿ ಸತೀಶ ಬೋಮಲೆ, ಉಮೇಶ ನೇಕಾರ, ಪ್ರಭುಗೌಡ ಎಕ್ಕಿಕೊಪ್ಪ, ಸ್ವಾತಿ ಪೈ, ಎಂ.ಸಿ. ಹಿರೇಮಠ, ರಾಮಣ್ಣ ಕದಡಿ, ಪಾರ್ವತಿ ಕಳ್ಳಿಮಠ ಸೇರಿದಂತೆ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗದಲ್ಲಿ ಪಾಲ್ಗೊಳ್ಳುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ ವಾಸುದೇವ ಸ್ವಾಮಿ ಸಹ ಯೋಗ ಮಾಡುವ ಮೂಲಕ ವiಕ್ಕಳಿಗೆ ಮಾದರಿಯಾದರು. ಯೋಗ ಸಾಧಕರು ಹೇಳಿಕೊಡುವ ಎಲ್ಲ ಆಸನಗಳನ್ನು ಸರಳವಾಗಿ ಮಾಡಿದ ಅವರು ಮಕ್ಕಳಿಗೆ ಉತ್ಸಾಹ ತುಂಬಿದರು.