
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯೋಗವೆಂಬುದು ನಮಗೆ ನಾವೇ ಕಂಡುಕೊಳ್ಳುವ ಚಿಕಿತ್ಸೆ ಮತ್ತು ಅರೋಗ್ಯದ ಕಣಜ. ಯೋಗ ರೋಗಿಗಳಿಗೆ ಸಂಪೂರ್ಣ ಚಿಕಿತ್ಸಾ ಪದ್ಧತಿಯಾದರೆ, ಯೋಗಿಗಳಿಗೆ ಸಾಧನೆಯ ಮಾರ್ಗವಾಗಿದೆ. ಪ್ರತಿಯೊಬ್ಬರೂ ನಿತ್ಯದ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಕಡಕೋಳ ಕಪ್ಪತ್ತಗಿರಿಯ ಬಸವ ಪತಂಜಲಿ ಯೋಗ ಸಮಿತಿ, ನಿಸರ್ಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ ವೀರೇಶ ಗುರೂಜಿ ಹೇಳಿದರು.
ಅವರು ಬಸವ ಪತಂಜಲಿ ಯೋಗ ಸಮಿತಿ, ತಾಲೂಕು ಕಂದಾಯ, ಪೊಲೀಸ್ ಇಲಾಖೆ, ಪುರಸಭೆ, ಬಿಸಿಎನ್ ವಿದ್ಯಾ ಸಂಸ್ಥೆ, ಇನ್ನರ್ವೀಲ್ ಕ್ಲಬ್, ಹಿರಿಯ ನಾಗರಿಕರ ಸಂಘ, ಕದಳಿ ವೇದಿಕೆ, ಯೋಗ ಸಾಧಕರ ಸಮಿತಿ, ಸರಕಾರಿ ನೌಕರರ ಸಂಘ, ನಿವೃತ್ತ ಶಿಕ್ಷಕರ ಸಂಘ, ಪತ್ರಕರ್ತರ ಸಂಘ, ಎಫ್ಎಮ್ಸಿಜಿ ಡಿಸ್ಟ್ರಿಬ್ಯೂಟರ್ ಅಸೋಸಿಯೇಶನ್, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ, ವಕೀಲರ ಸಂಘ, ವೈದ್ಯರ ಸಂಘ, ಔಷಧ ವ್ಯಾಪಾರಸ್ಥರ ಸಂಘ, ಕರ್ನಾಟಕ ಗಾಮೀಣ ಹಾಗೂ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಲಕ್ಷೇಶ್ವರ ಇವರ ಸಂಯುಕ್ತಾಶ್ರಯದಲ್ಲಿ ಬಿಸಿಎನ್ ಸ್ಪೆಕ್ಟ್ರಮ್ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ನಡೆದ ಉಚಿತ ಯೋಗ ಮತ್ತು ನಿಸರ್ಗ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಬದಲಾದ ಜೀವನ ಶೈಲಿಯಿಂದ ದೇಹ-ಮನಸ್ಸನ್ನು ಒಂದುಗೂಡಿಸಿ ಮನುಷ್ಯರಲ್ಲಿ ದೇಹಾರೋಗ್ಯ ಮತ್ತು ಮನೋಬಲ ಹೆಚ್ಚಿಸಲು ಯೋಗ ಪೂರಕ. ಒತ್ತಡಮುಕ್ತ ಮತ್ತು ಶಾಂತಿಯುತ ಬದುಕಿಗಾಗಿ ಯೋಗ, ಪ್ರಾಣಾಯಾಮ ಸಾಧನವಾಗಿವೆ. ಯೋಗವು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಅದು ಜಗತ್ತಿನ ಜನರ ಆರೋಗ್ಯಕರ ಜೀವನ ಕ್ರಮವಾಗಿದೆ. ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ದೈಹಿಕ, ಮಾನಸಿಕ ಆರೋಗ್ಯದ ಮೂಲಕ ಸುಂದರ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದರು.
ಕಡಕೋಳ ಕಪ್ಪತ್ತಗಿರಿಯ ಬಸವ ಪತಂಜಲಿ ಯೋಗ ನಿಸರ್ಗ ಚಿಕಿತ್ಸಾ ಕೇಂದ್ರ ಜಿಲ್ಲಾಧ್ಯಕ್ಷ ನಾಗರಾಜ ಸೂರಣಗಿ, ದಶರಥ ಕೋಟೆಗೌಡರ, ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಬಿವೃದ್ಧಿ ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ, ಔಷಧಿ ವ್ಯಾಪಾರಸ್ಥರ ಸಂಘ ಅಧ್ಯಕ್ಷ ಚಂದ್ರಶೇಖರ ಪಾಟೀಲ, ವೈ.ಎಸ್. ಕ್ಯೂಬಿಹಾಳ, ನಿರಂಜನ ವಾಲಿ, ನಾಗರಾಜ ಯಂಡಿಗೇರಿ, ಶಕುಂತಲಾ ವಡ್ಕಣ್ಣನವರ, ಜಯಶ್ರೀ ಹೊಸಮನಿ, ಶೈಲಾ ಆದಿ, ನಿರ್ಮಲಾ ಅರಳಿ, ರೂಪಾ ಸಂತಿ ಮುಂತಾದವರಿದ್ದರು.
ಡಾ. ಶ್ರೀಕಾಂತ ಬೆಳವಿಗಿ ಮಾತನಾಡಿ, ಮನುಷ್ಯರ ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಉತ್ತಮ ಅಡಿಪಾಯ. ದೈನಂದಿನ ಜೀವನದಲ್ಲಿ ಪುರುಷರು ಮತ್ತು ಮಹಿಳೆಯರು ಯೋಗಾಭ್ಯಾಸ ರೂಢಿಸಿಕೊಳ್ಳಬೇಕು. ಮಾರ್ಚ್ 1ರವರೆಗೆ ನಡೆಯುವ ಯೋಗ ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.