ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳು ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದು ದೈಹಿಕ ಶಿಕ್ಷಕ ವಿ.ಟಿ. ಅಂಗಡಿ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರೌಢಶಾಲೆ (ಆರ್ಎಂಎಸ್ಎ)ಯಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಯೋಗಾಭ್ಯಾಸದ ಮಹತ್ವ ಹಾಗೂ ಯೋಗ ಶಿಕ್ಷಣ ನೀಡಿ ಮಾತನಾಡಿದರು.
ಇಂದು ಆಧುನಿಕ ತಂತ್ರಜ್ಞಾನ ಬೆಳೆದಂತೆ ದೈಹಿಕ ಚಟುವಟಿಕೆಗಳು ನಿತ್ಯ ಕ್ಷೀಣಿಸುತ್ತಿದ್ದು, ಮಕ್ಕಳು ಈ ಸಮಯದಲ್ಲಿ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗದೇ ಹೋದಲ್ಲಿ ರೋಗ ರುಜಿನುಗಳಿಗೆ ತುತ್ತಾಗುವ ಸಂಭವ ಹೆಚ್ಚಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನಿತ್ಯ ಯೋಗಾಭ್ಯಾಸ ಮಾಡುವ ಅಗತ್ಯವಿದೆ ಎಂದರು.
ಶಾಲಾ ಪ್ರಧಾನ ಗುರು ಶರಣು ಪೂಜಾರ, ನೂರಹ್ಮದ ನದಾಫ್, ಜಿ.ಆರ್. ಕುಂದರಗಿ, ಎಸ್.ವಿ. ತಿಮ್ಮಾಪೂರ, ಎಲ್.ಡಿ. ರಾಠೋಡ, ಗೀತಾ ಪಾಟೀಲ, ಬಸವರಾಜ ಗೌರಿಮನಿ, ಎಸ್ಡಿಎಂಸಿ ಅಧ್ಯಕ್ಷ ಮಾಹಾದೇವಪ್ಪಾ ಮಾನೇಗಾರ, ಮಾಹಾಂತೇಶ ಕೆಂಚನಾಯ್ಕರ ಇದ್ದರು.