ವಿಜಯಸಾಕ್ಷಿ ಸುದ್ದಿ, ರೋಣ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಲ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಸಂಜೀವಿನಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯರು ಕೂಡ ಯೋಗದ ಸದುಪಯೋಗ ಪಡೆದುಕೊಳ್ಳಬೇಕು. ಯೋಗಾಸನವು ನಿರಂತರ ಅಭ್ಯಾಸದಿಂದ ವ್ಯಕ್ತಿಯ ಒತ್ತಡವನ್ನು ನಿವಾರಿಸಬಹುದು. ದೇಹ ಮತ್ತು ಇಂದ್ರಿಯಗಳ ನಿಯಂತ್ರಣದೊಂದಿಗೆ ಮಾನವ ಪ್ರಜ್ಞೆಯನ್ನು ಪರಿವರ್ತಿಸುತ್ತದೆ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲಾ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ. ಇದು ನಮ್ಮನ್ನು ಪ್ರಕೃತಿಯ ಜೊತೆಗೆ ಸಂಪರ್ಕ ಕಲ್ಪಿಸುವ ಮೂಲಕ ನಮ್ಮ ನೈಜಕತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದಂತ ಡಾ. ಎನ್.ಕೆ. ಹಿರೇಗೌಡರ್, ನಮ್ಮ ಭಾಗದ ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ತುಂಬಾ ಕಾಡುತ್ತಿರುವುದರಿಂದ ಈ ಒಂದು ವಾರದ ಯೋಗ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಲು ಅವಕಾಶ ನೀಡಿರುವುದು ಸಂತೋಷದ ವಿಷಯವೆಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಲಲಿತಾ ಕಲ್ಲನಗೌಡ್ರು, ಒಕ್ಕೂಟದ ಕಾರ್ಯದರ್ಶಿಗಳಾದ ಶೈಲಾ ಕುಷ್ಟಗಿ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಗುರು ವೀರಾಪುರ್, ಮುಖ್ಯ ಪುಸ್ತಕ ಬರಹಗಾರರಾದ ಈರಮ್ಮ ಕಲ್ಲನಗೌಡ, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.