ನಿಮಗೂ ಕರೆ ಬಂದೀತು, ಎಚ್ಚರ!

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಹಣ ವಂಚಕರ ತಂಡವೊಂದು ಪಟ್ಟಣದ ಖಾಸಗಿ ವೈದ್ಯ ಡಾ. ಎಸ್.ಸಿ. ಚವಡಿ ಅವರಿಗೆ ವಿಡಿಯೋ ಕರೆ ಮಾಡಿ ನಿರಂತರ 22 ಘಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಿಚಾರಣೆಗೆ ಒಳಪಡಿಸಿ ಹಣ ಪಡೆಯುವಲ್ಲಿ ಯಶಸ್ಸು ಕಾಣದೇ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ನ್ಯಾಶನಲ್ ಇನ್ವೆಸ್ಟಿಗೇಶನ್ ಆಥಾರಿಟಿ ಆಫ್ ಇಂಡಿಯಾ ಹೆಸರಲ್ಲಿ ಜೂನ್ 11ರಂದು 3 ಘಂಟೆ 7 ನಿಮಿಷಕ್ಕೆ ವೈದ್ಯ ಚವಡಿಯವರಿಗೆ ಕರೆ ಮಾಡಿ, ನೀವು ಮನಿ ಲ್ಯಾಂಡರಿಂಗ್ ಪ್ರಕರಣದಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಅಪಾರ ಪ್ರಮಾಣದ ಹಣ ದುರ್ಬಳಕೆ ಮಾಡಿದ್ದೀರಿ. ನಿಮ್ಮ ಹೆಸರಿನಲ್ಲಿ ಮುಂಬೈಯ ಕಲೋಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ನಿಮ್ಮನ್ನು ವಿಡಿಯೋ ಕರೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

ವಿಚಾರಣೆಗೆ ಮೊದಲು ವಿಜಯಕುಮಾರ ಎನ್ನುವ ವ್ಯಕ್ತಿಯೊಬ್ಬ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು ಎಲ್ಲ ವಿಚಾರಣೆ ನಡೆಸಿ, ನೀವು ವಯೋವೃದ್ಧರಾಗಿದ್ದು, ನಿಮ್ಮನ್ನು ಇಲ್ಲಿಗೆ ಕರೆಸಿ ವಿಚಾರಣೆ ಮಾಡುವದು ಸಮಂಜಸವಲ್ಲ ಎಂದು ತಿಳಿದು ವಿಡಿಯೋ ಕಾಲ್‌ನಲ್ಲಿ ವಿಚಾರಣೆ ಮಾಡುತ್ತಿದ್ದೇವೆ. ಮುಂದೆ ಡಿಸಿಪಿ ನಿಮ್ಮ ಜೊತೆ ವಿಚಾರಣೆ ಮಾಡುವರು. ಅವರೊಂದಿಗೆ ನಯ-ವಿನಯದೊಂದಿಗೆ ನಡೆದುಕೊಳ್ಳಿ ಎಂದು ತಿಳಿಸಿದ್ದ.

ನರೇಶ ಗೋಯಲ್ ಹಾಗೂ ಅವರ ಗ್ಯಾಂಗ್‌ನವರು ನಿಮ್ಮನ್ನು ಹಿಂಬಾಲಿಸುತ್ತಿದ್ದಾರೆ. ನೀವು ಈ ವಿಷಯವನ್ನು ಯಾರಿಗೂ ತಿಳಿಸಬೇಡಿ. ಮನೆಯಲ್ಲಿ ನಿಮ್ಮ ಮನೆಯವರೊಂದಿಗೆ ಸಂಶಯ ಬರದಂತೆ ನಡೆದುಕೊಳ್ಳಿ, ಅವರು ನಿಮ್ಮನ್ನು ಕೊಲೆ ಮಾಡಲು ಹಿಂಬಾಲಿಸುತ್ತಿದ್ದಾರೆ. ಹೀಗಾಗಿ ಗೌಪ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ನಂತರ ಮರುದಿನ ಮಧ್ಯಾಹ್ನ 12 ಘಂಟೆಗೆ ಡಿಸಿಪಿ ದಯಾನಾಯಕ ವಿಚಾರಣೆ ಮಾಡಲು ಪ್ರಾರಂಭಿಸಿ, ನಾವು ವಿಚಾರಣೆ ಮಾತ್ರ ಮಾಡುತ್ತೇವೆ ನಂತರ ಸುಪ್ರೀಂ ಕೋರ್ಟಿಗೆ ಪ್ರಕರಣ ದಾಖಲಿಸುತ್ತೇವೆ. ಅಲ್ಲಿ ನಿಮ್ಮ ಮಾಹಿತಿ ಒದಗಿಸಲಾಗುತ್ತದೆ. ಆಗ ನೀವು ವಕೀಲರನ್ನು ನೇಮಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ತರುವಾಯ, ಪಟ್ಟಣದಲ್ಲಿ ವೈದ್ಯರು ಕೋಣೆಯಲ್ಲಿ ಬಂಧಿಯಾಗಿದ್ದಾರೆ ಎಂಬ ಸುದ್ದಿ ತಿಳಿದು ಊರಿನ ಗುಂಪೊಂದು ಮನೆಗೆ ಪೊಲೀಸರೊಂದಿಗೆ ಧಾವಿಸಿ ಬಂದು ಬಾಗಿಲು ಮುರಿಯುವ ಪ್ರಯತ್ನ ಮಾಡಿದಾಗ ಡಾ. ಎಸ್.ಸಿ. ಚವಡಿ ಬಾಗಿಲು ತೆರೆದರು. ಆಗ ಮುಳಗುಂದ ಸಿಪಿಐ ಸಂಗಮೇಶ ಶಿವಯೋಗಿ ವಂಚಕರ ವಿಡಿಯೋ ಕಾಲ್‌ನಲ್ಲಿ ಮಾತನಾಡಲು ಪ್ರಾರಂಭಿಸಿದಾಗ ವಂಚಕರು ವಿಡಿಯೋ ಕಾಲ್ ಕಟ್ ಮಾಡಿದ್ದಾರೆ.

ಈ ಕುರಿತು ಗದಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮುಂದಿನ ತನಿಖೆ ನಡೆದಿದೆ.

ಪ್ರಕರಣದ ಕುರಿತು ಈಗಾಗಲೇ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಸಾರ್ವಜನಿಕರು ಇದರ ಬಗ್ಗೆ ಭಯ ಬೀಳದೇ ಮುಕ್ತವಾಗಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿ. ಇಂತಹ ಪ್ರಕರಣದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಯಾವದೇ ಓಟಿಪಿಯನ್ನು ಜಾಲತಾಣದಲ್ಲಿ ಹಂಚಿಕೊಳ್ಳಬಾರದು.

ಸಂಗಮೇಶ ಶಿವಯೋಗಿ.

ಸಿಪಿಐ ಮುಳಗುಂದ.


Spread the love

LEAVE A REPLY

Please enter your comment!
Please enter your name here