ಹುಣಸೂರು: ಪ್ರೇಮಿ ಮಾಡಿದ ಎಡವಟ್ಟಿನಿಂದ ಬಯಲಾಗುತ್ತಿದ್ದಂತೆ ಎರಡು ಕುಟುಂಬ, ಸಮುದಾಯಗಳ ನಡುವೆ ನಡೆದ ಘರ್ಷಣೆ, ಮರ್ಯಾದೆಗೆ ಅಂಜಿದ ಮಹಿಳೆ ಮತ್ತು ಪಕ್ಕದ ಬೀದಿಯ ಯುವಕ ಪ್ರತ್ಯೇಕವಾಗಿ ಸಿನಿಮೀಯ ಮಾದರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹುಣಸೂರು ನಗರದ ಕಲ್ಕುಣಿಕೆಯಲ್ಲಿ ಘಟನೆ ನಡೆದಿದ್ದು, ಕಲ್ಕುಣಿಕೆಯ ಹತ್ತಿಮರದ ಬೀದಿಯ ನೀಲಕಂಠಾಚಾರಿ ಪುತ್ರ ರಘು ಪತ್ನಿ ಶೃತಿ(28) ಹಾಗೂ ಇದೇ ಬಡಾವಣೆಯ ಪಕ್ಕದ ಬೀದಿಯ ಮಹದೇವನಾಯಕರ ಪುತ್ರ ಮುರಳಿ(20) ನೇಣಿಗೆ ಶರಣಾದವರು.
ಕಳೆದ 7ವರ್ಷಗಳ ಹಿಂದೆ ರಘುವಿನೊಂದಿಗೆ ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆಯ ಶೃತಿಗೆ ವಿವಾಹವಾಗಿದ್ದು, ಆರು ಮತ್ತು ಮೂರು ವರ್ಷದ ಇಬ್ಬರು ಮಕ್ಕಳಿದ್ದಾರೆ.
ಘಟನೆ ವಿವರ:
ಮುರುಳಿ ಎಲೆಕ್ಟ್ರಿಶಿಯನ್ ಕೆಲಸ ನಿರ್ವಹಿಸುತ್ತಿದ್ದ, ಪಕ್ಕದ ಬೀದಿಯ ಶೃತಿಯೊಂದಿಗೆ ಸಲುಗೆ ಬೆಳೆದು ಅಕ್ರಮ ಸಂಬಂಧ ಬೆಳೆಸಿದ್ದ, ಮುರಳಿ ಶೃತಿಯೊಂದಿಗಿರುವ ಪೋಟೋವನ್ನು ತನ್ನ ಸ್ಟೇಟಸ್ನಲ್ಲಿ ಅಪ್ ಲೋಡ್ ಮಾಡಿದ್ದು, ಇದು ವಾರದ ಹಿಂದೆ ವೈರಲ್ ಆಗುತ್ತಿದ್ದಂತೆ ಶೃತಿ ಮನೆಯಲ್ಲಿ ಹಾಗೂ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ.
ಆತಂಕಗೊಂಡ ಶೃತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಶೃತಿ ಆತ್ಮಹತ್ಯೆ ಘಟನೆಯಿಂದ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ. ಶೃತಿ ಆತ್ಮಹತ್ಯೆಗೆ ಮುರುಳಿಯೇ ಕಾರಣವೆಂದು ಆಕೆಯ ಪತಿ ರಘು ದೂರು ನೀಡಿದ್ದರೆ, ಇತ್ತ ಮುರುಳಿ ಕಡೆಯವರು ಸಹ ತಮಗೆ ರಘು ಕಡೆಯವರು ರಸ್ತೆಯಲ್ಲಿ ಬೈಯುತ್ತಾ ಹೋಗುತ್ತಾರೆಂದು ಶೃತಿ ಕುಟುಂಬದವರ ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದಾರೆ.
ಒಂದೆಡೆ ಪ್ರೇಮಿಯ ಸಾವು, ಮತ್ತೊಂದೆಡೆ ಎರಡು ಕಡೆಯವರ ಘರ್ಷಣೆಯಿಂದ ಹೆದರಿದ ಎಲೆಕ್ಟ್ರಿಶಿಯನ್ ಮುರುಳಿ ಸಹ ಕೆ.ಆರ್.ನಗರದ ರೈಲ್ವೆ ನಿಲ್ದಾಣದ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ನಡುವೆ ಶೃತಿಯ ಪತಿ ಕುಟುಂಬದ ಚೆಲುವಾಚಾರಿ, ರವಿ, ಮಹೇಂದ್ರರ ವಿರುದ್ದ ನಗರ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದರೆ. ಮುರಳಿ ಸಾವಿನ ಸಂಬಂಧ ಕೆ.ಆರ್.ನಗರ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಒಟ್ಟಾರೆ ಇದೊಂದು ಸಿನಿಮೀಯ ರೀತಿಯ ಘಟನೆಯಾಗಿದ್ದು, ಎರಡು ಜೀವಗಳ ಲಲ್ವಿ-ಡವ್ವಿ ಸಾವಿನಲ್ಲಿ ಅಂತ್ಯವಾಗಿರುವುದು ದುರಂತ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.