HomeGadag Newsಎಳೆಯರು ಯಾವಾಗಲೂ ಗೆಳೆಯರಾಗಿರಬೇಕು

ಎಳೆಯರು ಯಾವಾಗಲೂ ಗೆಳೆಯರಾಗಿರಬೇಕು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶರಣರು ಎಂದರೆ ಅರಿವು ಮತ್ತು ಆಚಾರ ಒಂದಾದವರು. 12ನೇ ಶತಮಾನದ ಕಲ್ಯಾಣದಲ್ಲಿ ನೆಲೆನಿಂತ ಬಸವಾದಿ ಶಿವಶರಣರು ಮುಕ್ತವಾಗಿ ಅಭಿವ್ಯಕ್ತಿಗೊಳಿಸಿದ ನುಡಿಮುತ್ತುಗಳೇ ವಚನಗಳು ಎಂದು ರೋಟರಿ ಗದಗ ಸೆಂಟ್ರಲ್ ಕ್ಲಬ್ ಅಧ್ಯಕ್ಷ ಚೇತನ ಅಂಗಡಿ ಹೇಳಿದರು.

ಅವರು ಬೆಟಗೇರಿಯ ರಂಗಾವಧೂತರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.10ರಲ್ಲಿ ಗದಗ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ಜರುಗಿದ ಅಮೃತಭೋಜನ ಜ್ಞಾನಸಿಂಚನ ಮಾಲಿಕೆ-15ರಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

ವಚನ ರಚನೆಯ ಮೂಲಕ ಲೋಕದ ಡೊಂಕನ್ನು ತಿದ್ದುವ ಕಾಯಕವನ್ನು ನಿಷ್ಠೆಯಿಂದ ಮಾಡಿ ಅಜರಾಮರರಾದವರು ಶರಣರು. ಇವರ ಸದ್ಭಾವನೆಯು ನಮಗೆ ಸದಾ ಆದರ್ಶ. ಎಳೆಯರು ಯಾವಾಗಲೂ ಗೆಳೆಯರಾಗಿರಬೇಕು. ಶರಣರು ಪರಿಸರ ಪ್ರೇಮಿಗಳು. ವೈಜ್ಞಾನಿಕ ಮನೋಭಾವ, ವೈಚಾರಿಕ ಚಿಂತನೆಗಳು ಇವರ ವಚನದಲ್ಲಿ ಕಂಡು ಬರುತ್ತವೆ. ಮಕ್ಕಳು ಪ್ರತಿನಿತ್ಯ ವಚಾನಾಮೃತವನ್ನು ರೂಢಿ ಮಾಡಬೇಕು. ಓದಿದ್ದನ್ನು ಮನನ ಮಾಡಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ಯಶಸ್ಸಿನ ಮೆಟ್ಟಿಲೇರಬೇಕು ಎಂದರು.

ಮಕ್ಕಳಿಗೆ ಅಮೃತ ಭೋಜನ ಉಣಬಡಿಸಿದ ಗಣ್ಯ ವರ್ತಕ ಮಂಜುನಾಥ ಬೇಲೇರಿ ಮಾತನಾಡಿ, ಸದ್ಭಾವನೆಗಳು ಸುಗಂಧ ಬೀರುವ ಹೂವುಗಳಂತೆ. ನಾವು ಶರಣರ ಬದುಕನ್ನು ಮಾದರಿಯಾಗಿ ಇಟ್ಟುಕೊಂಡು ಮುನ್ನಡೆಯಬೇಕು. ಸತ್ಯ, ಪ್ರಾಮಾಣಿಕತೆ ರೂಢಿಸಿಕೊಂಡಲ್ಲಿ ಸದ್ಭಾವನೆಯು ತಾನಾಗಿಯೇ ಒಡಮೂಡುತ್ತದೆ. ಪರಸ್ಪರ ಗೌರವ, ಮಾನವೀಯತೆಯ ಸಂಬಂಧಗಳು ಬೆಳೆಸಿಕೊಳ್ಳಲು ಮಕ್ಕಳು ಮುಂದಾಗಬೇಕು ಎಂದರು.

ಕ್ಲಬ್‌ನ ಖಜಾಂಚಿ ಡಾ. ಪ್ರಭು ಗಂಜಿಹಾಳ ಮಾತನಾಡಿ, ಪರಸ್ಪರ ನಾವು ಒಬ್ಬರಿಗೊಬ್ಬರು ಸ್ನೇಹ ಸಂಬಂಧದಿಂದ ಕೂಡಿ ಬೆಳೆಯಬೇಕು. ವಿದ್ಯಾರ್ಥಿ ಜೀವನ ಬಂಗಾರದ ಜೀವನವಿದ್ದಂತೆ. ಹಿರಿಯರ, ಶರಣರ ಜೀವನ ಚರಿತ್ರೆಗಳು ನಮ್ಮಲ್ಲಿ ಆದರ್ಶ ಮೌಲ್ಯಗಳನ್ನು ಬಿತ್ತುತ್ತವೆ. ನುಡಿದಂತೆ ನಡೆದ ಶರಣರು ಸದ್ಭಾವನೆಯ ಮೂರ್ತಿಗಳಾಗಿದ್ದಾರೆ. ಮಕ್ಕಳು ವಚನಗಳತ್ತ ತಮ್ಮ ಚಿತ್ತವ ಹರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯೆ ಆರ್.ಎಲ್. ಹೂವಿನಹಳ್ಳಿ ಮಾತನಾಡಿ, ಉತ್ತಮ ಮೌಲ್ಯಗಳೊಂದಿಗೆ ಬಾಲ್ಯದಲ್ಲಿಯೇ ಮಾನವೀಯತೆಯೊಂದಿಗೆ ಬೆಳೆಯಬೇಕು. ಶರಣರು ವಚನಗಳ ಮೂಲಕ ಉತ್ತಮ ಸಂದೇಶಗಳನ್ನು ತಿಳಿಸಿದ್ದು, ಮಕ್ಕಳು ವಚನಗಳ ರೂಢಿಯನ್ನು ಮಾಡಿಕೊಳ್ಳಬೇಕು. ಗದುಗಿನ ಕದಳಿಶ್ರೀ ವೇದಿಕೆಯು ಶಾಲಾ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವುದಕ್ಕೆ ಅಭಿನಂದಿಸಿದರು.

ಪ್ರಾಯೋಜಕತ್ವವನ್ನು ರೋಟರಿ ಗದಗ ಸೆಂಟ್ರಲ್ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಮೇಶ ತೋಟದ ವಹಿಸಿಕೊಂಡಿದ್ದರು. ಮಕ್ಕಳು ಸಾಮೂಹಿಕವಾಗಿ ವಚನ ಪ್ರಾರ್ಥನೆಗೈದರು. ಎಚ್.ಬಿ. ಬಾಕಳೆ ಸ್ವಾಗತಿಸಿದರು. ಎಸ್.ಬಿ. ಮುಧೋಳಮಠ ನಿರೂಪಿಸಿದರು. ಜಿ.ಕೆ. ಹೂಗಾರ ಪರಿಚಯಿಸಿದರು. ಕವಿತಾ ಬೇಲೇರಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್. ಜಂತ್ಲಿ, ನಾಗವೇಣಿ ಮಾದಗುಂಡಿ, ಬಸಮ್ಮ ಕೋರಿ, ಸುವರ್ಣ ಹೊಸಮನಿ ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಲಬ್‌ನ ಮಾಜಿ ಅಧ್ಯಕ್ಷ ದಶರಥರಾಜ ಕೊಳ್ಳಿ, ವಚನಗಳು ಜಾತ್ಯಾತೀತ ಮನೋಭಾವನೆಗೆ ಹೆಚ್ಚು ಒತ್ತು ನೀಡಿವೆ. ಸಕಲ ಜೀವಾತ್ಮರ ಒಳೀತನ್ನೇ ಬಯಸುವ ಸದ್ಭಾವನೇಯ ಶಿಖರವೇ ನಮ್ಮ ವಚನಕಾರರು. ನಾವು ಕಾಯಕ ಯೋಗಿಗಳಾಗಬೇಕು. ವಿದ್ಯಾರ್ಥಿಗಳು ಉತ್ತಮ ಓದಿನೊಂದಿಗೆ ರಾಷ್ಟ್ರೀಯತೆ, ದೇಶಪ್ರೇಮ, ಸೌಹಾರ್ದತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸದಾಚಾರವೇ ನಮ್ಮನ್ನು ಸದ್ಭಾವರನ್ನಾಗಿಸುತ್ತದೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!