ವಿಜಯಸಾಕ್ಷಿ ಸುದ್ದಿ, ಗದಗ : ಯುವಕರು ದುಶ್ಚಟಗಳಿಂದ ಮುಕ್ತರಾಗಿ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ. ಸೋಲು-ಗೆಲುವು ಮುಖ್ಯವಲ್ಲ. ಎರಡನ್ನೂ ಸಮನಾಗಿ ಸ್ವೀಕರಿಸಿ ಎಂದು ಬಿಜೆಪಿಯ ಯುವ ಮುಖಂಡ ವಸಂತ ಪಡಗದ ಯುವಕರಿಗೆ ಕರೆ ನೀಡಿದರು.
ಅವರು ಗದಗ ನಗರದ ರೈಮತ್ ನಗರದ ಅಕ್ಕಾ ತಂಗಿ ಮೈದಾನದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಬ್ಲೂ ಸ್ಟಾರ್ ಅಕಾಡೆಮಿ ಆಯೋಜನೆ ಮಾಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಜೀವನದಲ್ಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಲು ಶಕ್ತರಾಗುತ್ತೀರಿ. ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ಸದೃಢ ಯುವಜನತೆ ಈ ದೇಶದ ಸಂಪತ್ತು ಎಂದು ಅವರು ಹೇಳಿದರು.
ಪಂದ್ಯಾವಳಿಯಲ್ಲಿ ಒಟ್ಟು 15 ತಂಡಗಳು ಭಾಗವಹಿಸಿದ್ದವು. ಈ ಪೈಕಿ ಗಂಗಾಪೂರ ಪೇಟಿಯ ಬ್ರದರ್ಸ್ ತಂಡ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಬಹುಮಾನವನ್ನು ಎಸ್.ಎಂ. ಕೃಷ್ಣಾ ನಗರದ ಸಿದ್ದಿವಿನಾಯಕ ತಂಡ ಪಡೆದುಕೊಂಡಿತು. ತೃತೀಯ ಬಹುಮಾನವನ್ನು ಸಂಜಯ ಗಾಂಧಿ ಕಾಲೋನಿಯ ಬ್ಲೂ ಸ್ಟಾರ್ ತಂಡ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸುದೀಪ್ ಕೊಡವೆ, ಯಶಮಂತ ಬಳ್ಳಾರಿ, ಇರ್ಫಾನ್ ಬಳ್ಳಾರಿ, ನಾಗರಾಜ ಗುಡ್ಡನಾಯ್ಕರ್ ಮುಂತಾದವರು ಪಾಲ್ಗೊಂಡಿದ್ದರು.