ವಿಜಯಸಾಕ್ಷಿ ಸುದ್ದಿ, ಗದಗ : ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಇವರಗಳ ಸಹಭಾಗಿತ್ವದಲ್ಲಿ ಬುಧವಾರ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಪ್ರವಾಸಿಗರು ಜಿಪ್ಲೈನ್ನಲ್ಲಿ ಸಂಚರಿಸುತ್ತಿದ್ದಾಗ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಾಗ ಅವರನ್ನು ಹೇಗೆ ರಕ್ಷಣೆ ಮಾಡಬೇಕೆಂಬ ಕುರಿತು ಎನ್ಡಿಆರ್ಎಫ್ ತಂಡದವರು ಪ್ರಾತ್ಯಕ್ಷಿಕೆ ಮುಖಾಂತರ ಪ್ರದರ್ಶಿಸಿ ತಿಳಿಸಿಕೊಟ್ಟರು.
ಎನ್ಡಿಆರ್ಎಫ್ ಪಡೆಯ ಕಮಾಂಡೆಂಟ್ ಅಖಿಲೇಶ್ ಮಾತನಾಡಿ, ಜಿಪ್ಲೈನ್ನಲ್ಲಿ ತಾಂತ್ರಿಕ ತೊಂದರೆಯಿಂದ ಸಿಲುಕಿದವರನ್ನು ರಕ್ಷಣೆ ಮಾಡುವ ಬಗ್ಗೆ ಸವಿವರವಾಗಿ ವಿವರಿಸಿದರು. ಜಿಪ್ಲೈನ್ ರೆಸ್ಕ್ಯೂಗೆ ಸಂಬಂಧಿಸಿದ ವಿಷಯವನ್ನು ಒದಗಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸದಾ ಸಿದ್ಧವಿರುತ್ತದೆ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್ ಮೀನಾ ಮಾತನಾಡಿ, ಜಿಪ್ಲೈನ್ ರೆಸ್ಕ್ಯೂ ಕುರಿತಾದ ಪ್ರದರ್ಶನ ಎಲ್ಲಾ ಅರಣ್ಯ ಸಿಬ್ಬಂದಿಗೆ ತುಂಬಾ ಉಪಯುಕ್ತವಾಗಿದ್ದು, ಜಿಪ್ನಲ್ಲಿ ಯಾವುದೇ ತೊಂದರೆ ಎದುರಾದರೂ ಎದುರಿಸುವ ಮಾಹಿತಿ ಒದಗಿಸಿ ನಮ್ಮೆಲ್ಲರಲ್ಲಿ ಉತ್ಸಾಹ ತಂದಿದ್ದಕ್ಕೆ ಎನ್ಡಿಆರ್ಎಫ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಉದ್ಯಾನವನಕ್ಕೆ ಆಗಮಿಸಿದ ಸಾರ್ವಜನಿಕರು ಸಾಲುಮರದ ತಿಮ್ಮಕ್ಕ ಪಾರ್ಕ್ನಲ್ಲಿರುವ ಜಿಪ್ಲೈನ್ನಲ್ಲಿ ಯಾವುದೇ ಭಯವಿಲ್ಲದೆ ಧೈರ್ಯದಿಂದ ಸಂಚರಿಸಿ ಪ್ರಕೃತಿಯ ಸೊಬಗನ್ನು ಮುಕ್ತವಾಗಿ ಸವಿಯಬಹುದಾಗಿದೆ ಮತ್ತು ಯಾವುದೇ ರೀತಿಯ ತೊಂದರೆಗಳು ಎದುರಾದರೂ ಅದನ್ನು ಪರಿಹರಿಸುವ ಸಾಮರ್ಥ್ಯ ಅರಣ್ಯ ಇಲಾಖೆಗೆ ಇದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞ ಶಿವಾನಂದ ರಾಜನಾಳ, ಇನ್ಸ್ಪೆಕ್ಟರ್ ಕೃಷ್ಣ, ವಲಯ ಅರಣ್ಯ ಅಧಿಕಾರಿ ವೀರೇಂದ್ರ ಮರಿಬಸಣ್ಣವರ್, ಉಪವಲಯ ಅರಣ್ಯ ಅಧಿಕಾರಿ ಸಚಿನ್ ಬಿಸನಳ್ಳಿ, ಅಗ್ನಿಶಾಮಕ ದಳದ ಇನ್ಸ್ಪೆಕ್ಟರ್ ವೆಂಕಟೇಶ್ ಹಾಗೂ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.
ಉದ್ಯಾನದಲ್ಲಿರುವ ಜಿಪ್ಲೈನ್ ವ್ಯವಸ್ಥೆ ಅತ್ಯಂತ ಖುಷಿ ವಿಚಾರ. ಎಷ್ಟೋ ಜನರ ಜಿಪ್ಲೈನ್ನಲ್ಲಿ ಸಂಚರಿಸುವ ಕನಸನ್ನು ನನಸಾಗಿಸಲು ಸುವರ್ಣ ಅವಕಾಶ ಇದಾಗಿದೆ. ಎನ್ಡಿಆರ್ಎಫ್ ಮತ್ತು ಅರಣ್ಯ ಇಲಾಖೆಯ ರಕ್ಷಣಾ ವ್ಯವಸ್ಥೆ ಸಾರ್ವಜನಿಕರಲ್ಲಿ ಧೈರ್ಯ ತುಂಬಿದಂತಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.