ವಿಜಯಸಾಕ್ಷಿ ಸುದ್ದಿ, ನರಗುಂದ: ತಾಲೂಕಿನ ಶಿರೋಳ ಗ್ರಾಮದ ಜಗದ್ಗುರು ತೋಂಟದಾರ್ಯ ಮಠದ ಸಭಾಭವನದಲ್ಲಿ ನರಗುಂದ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ವಲಯ ಮಟ್ಟದ ಪೋಷಣ್ ಮಾಸಾಚರಣೆ ಹಾಗೂ ಸೇವಾ ನಿವೃತ್ತಿ ಹೊಂದಿದ ಕಾರ್ಯಕರ್ತೆ/ಸಹಾಯಕಿಯರ ಸನ್ಮಾನ ಕಾರ್ಯಕ್ರಮ ಜರುಗಿತು.
ಗ್ರಾ.ಪಂ ಅಧ್ಯಕ್ಷೆ ಹನಮವ್ವ ಹಿರೇಮನಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿಯ ಎದೆ ಹಾಲು ಕುಡಿಸುವುದು ಬಹಳ ಉತ್ತಮವಾಗಿದ್ದು, ಈ ವಿಷಯದಲ್ಲಿ ತಂದೆ-ತಾಯಿ ಜಾಗೃತೆ ವಹಿಸಬೇಕು. ಗರ್ಭಿಣಿಯರು, ಬಾಣಂತಿಯರು ಅಪೌಷ್ಠಿಕತೆ, ರಕ್ತಹೀನತೆಯಿಂದ ಬಳಲದಂತೆ ನಿಗಾ ವಹಿಸಬೇಕು ಎಂದರು.
ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಸಿಡಿಪಿಒ ಕಮಲವ್ವ ಹುಲಕೋಟಿ ಶ್ಲಾಘಿಸಿದರು. ಮೇಲ್ವಿಚಾರಕಿ ಪರಿಮಳಾ ಹೂಗಾರ ಹಾಗೂ ಪೋಷಣ್ ಅಭಿಯಾನ ಸಂಯೋಜಕರಾದ ಮಂಜುನಾಥ ಗುಗ್ಗರಿ `ಸಮತೋಲನ ಆಹಾರದ ಮಹತ್ವ’ ವಿಷಯದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿರೋಳ ವಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾರ್ಯಕರ್ತೆ ಶಾಂತಾ ಕುಪ್ಪಸ್ತ, ಸಹಾಯಕಿಯರಾದ ದಾದೀಮಾ ನದಾಫ್, ಬಿಬೀಜಾನ್ ಕಲಹಾಳ, ಸಾವಕ್ಕ ಹಿರೇಹೊಳಿ, ರೇಣವ್ವ ಜಕ್ಕಣ್ಣವರ, ಪಾರ್ವತೀವ್ವ ನರಗುಂದ ಇವರನ್ನು ಸನ್ಮಾನಿಸಲಾಯಿತು. ಜೈ-ಕಿಸಾನ್ ಕಲಾ ತಂಡದಿಂದ ಪೌಷ್ಠಿಕತೆ ಸಂಬಂಧಿಸಿದಂತೆ ಗೀತೆಗಳ ಮೂಲಕ ಅರಿವು ಮೂಡಿಸಲಾಯಿತು.
ಪಂಚಾಯತಿ ಉಪಾಧ್ಯಕ್ಷರಾದ ಹನಮಂತಗೌಡ ತಿರಕನಗೌಡ್ರ, ಸದಸ್ಯರಾದ ಗೊಡಚಪ್ಪ ಚಿಂದಿ, ಕೌಶರಬಾನು ಮುಲ್ಲಾ, ದ್ಯಾಮನಗೌಡ ಪಾಟೀಲ, ಜೈ ಕಿಸಾನ್ ಕಲಾ ತಂಡದ ನಾಯಕ ಪ್ರಕಾಶ ಚಂದನ್ನವರ, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು, ತಾಯಂದಿರು ಹಾಗೂ ಮಕ್ಕಳು ಭಾಗವಹಿಸಿದ್ದರು. ರೇಣುಕಾ ತಳವಾರ ಸ್ವಾಗತಿಸಿದರು. ಶಾರದಾ ರೋಣದ ಕಾರ್ಯಕ್ರಮ ನಿರೂಪಿಸಿದರು. ವಿ.ಎಸ್. ಹಂಚಿನಮನಿ ವಂದಿಸಿದರು.