ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು
ಹುಕ್ಕಾ ಬಾರಿನ ಬಗ್ಗೆ ಮಾತನಾಡಿದ್ದಕ್ಕೆ ಉರಿ ಹತ್ತಿಕೊಂಡಂತೆ ಮಾತನಾಡುತ್ತಿದ್ದಾರೆ. ನೆಹರೂ ಹುಕ್ಕಾ ಸೇದುತ್ತಿದ್ದದು ತಪ್ಪೋ, ರವಿ ಹೇಳಿದ್ದು ತಪ್ಪೋ? ರವಿ ಹೇಳಿದ್ದು ತಪ್ಪು ಎನ್ನುವುದಾದರೆ ಅವರಿಗೆ ನೆಹರೂ ಬಗ್ಗೆ ಇನ್ನೆಷ್ಟು ಆಕ್ರೋಶ ಇರಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಹರೂ ಹುಕ್ಕಾ ಸೇದುವ ನೂರಾರು ಫೋಟೋಗಳಿವೆ. ಕಾಂಗ್ರೆಸಿಗರಿಗೆ ನನ್ನ ಮೇಲೆ ಇಷ್ಟು ದ್ವೇಷ ಇದೆ ಅನ್ನೋದಾದರೆ ನೆಹರೂ ಬಗ್ಗೆ ಎಷ್ಟು ದ್ವೇಷ ಇರಬಹುದು? ನೆಹರೂ, ಇಂದಿರಾ ಬಗ್ಗೆ ನಾನು ಮಾತನಾಡಿದ್ದು ತಪ್ಪು ಅನ್ನುತ್ತಿದ್ದಾರೆ ಎಂದು ಕುಟುಕಿದರು.
ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಇಂದಿರಾ ಬಗ್ಗೆ ಮಾತನಾಡಿರುವುದನ್ನು ಕೇಳಿಸಬೇಕಾ? ಇಬ್ರಾಹಿಂ ಇಂದಿರಾ ಗಾಂಧಿಯನ್ನು ಏನೆಂದು ಕರೆದಿದ್ರು? ನಾನು ಆ ಮಟ್ಟಕ್ಕೆ ಇಳಿದಿಲ್ಲ. ನನಗೆ ಕುಡಿಯೋ ಅಭ್ಯಾಸವಿಲ್ಲ, ಕುಡುಕನ ಪಟ್ಟ ಕಟ್ಟಿದರು. ಆದರೆ, ದಿನಾ ಕುಡಿಯುವವರು ಅವರೇ ಎಂದು ತಿರುಗೇಟು ನೀಡಿದರು.
ನಾನು 5 ಗಂಟೆಗೆ ಎದ್ದು ಯೋಗ ಮಾಡುತ್ತೇನೆ. ಇಡೀ ದಿನ ಸಕ್ರಿಯವಾಗಿರುತ್ತೇನೆ. ನಾನು ಆರೆಸ್ಸೆಸ್ ಸ್ವಯಂ ಸೇವಕ, ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ ಎಂದು ಕುಟುಕಿದರು.