ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ : ಜಿಲ್ಲೆಯ ಗಂಗಾವತಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಇದರಿಂದ ಎಚ್ಚೆತ್ತುಕೊಂಡ ಗಂಗಾವತಿ ನಗರಸಭೆ ಆಪರೇಷನ್ ಡಾಗ್ ಕಾರ್ಯಾಚರಣೆಯನ್ನು ಬುಧುವಾರದಿಂದ ಪ್ರಾರಂಭಿಸಿದೆ.
ನಗರದ ಡೈಲಿ ತರಕಾರಿ ಮಾರುಕಟ್ಟೆ, ಗಾಂಧಿವೃತ್ತ, ಮಹಾವೀರ ಸರ್ಕಲ್ ಸೇರಿದಂತೆ ವಿವಿಧ ಪ್ರಮುಖ ಬೀದಿಗಳಲ್ಲಿ ಕಾರ್ಯಚರಣೆ ನಡೆಸಿತು. ಬುಧವಾರ ಒಂದೇ ದಿನ ನೂರಕ್ಕೂ ಹೆಚ್ಚು ನಾಯಿಗಳನ್ನು ಸೆರೆ ಹಿಡಿಯಲಾಗಿದ್ದು, ಅವುಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಗಳಲ್ಲಿ ಬಿಡಲಾಗುವುದು ಎಂದು ನಗರಸಭೆ ಕಮೀಷನರ್ ಅರವಿಂದ್ ಜಮಖಂಡಿಯವರು ತಿಳಿಸಿದ್ದಾರೆ.
ಇನ್ನೂ ಆಪರೇಷನ್ ಡಾಗ್ ಕಾರ್ಯಾಚರಣೆ ಸತತವಾಗಿ ಮೂರು ದಿನಗಳ ಕಾಲ ಮುಂದುವೆರಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಶ್ವಾನಗಳನ್ನು ಹಿಡಿಯಲು ಶಿವಮೊಗ್ಗ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ..
ಸಾಕಿದ ನಾಯಿಗಳನ್ನು ಹೊರತುಪಡಿಸಿ, ಬೀದಿಗಳಲ್ಲಿ ಜನರಿಗೆ ತೊಂದರೆ ಕೊಡುತ್ತಿರುವ ನಾಯಿಗಳನ್ನು ಗುರುತಿಸಿ ಸೆರೆ ಹಿಡಿಯಲಾಗುತ್ತಿದೆ. ಅಲ್ಲದೇ ನುರಿತ ಕೆಲಸಗಾರದಿಂದ ನಾಯಿಗಳನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬೀಡಲಾಗುತ್ತಿದೆ. ಆಪರೇಷನ್ ಡಾಗ್ ಕಾರ್ಯಾಚರಣೆ ಗಂಗಾವತಿ ಸಾರ್ವಜನಿಕರ ದೂರಿನ ಮೇರೆ ಪ್ರಾರಂಭಿಸಲಾಗಿದೆ. ಇನ್ನೂ ಮೂರು ದಿನಗಳ ಕಾಲ ಕಾರ್ಯಾಚರಣೆ ಮುಂದುವರಿಯಲಿದೆ.
-ಅರವಿಂದ್ ಜಮಖಂಡಿ, ಗಂಗಾವತಿ ನಗರಸಭೆ ಕಮೀಷನರ್.