ವಿಜಯಸಾಕ್ಷಿ ಸುದ್ದಿ, ಗದಗ
ಕೊರೊನಾ ಲಾಕ್ ಡೌನ್ ಜನರ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಎರಡು ತಿಂಗಳ ಕಾಲ ಎಲ್ಲವೂ ಲಾಕ್ ಆದ ಪರಿಣಾಮ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಸಂಕಷ್ಟದ ಜೀವನ ನಡೆಸಬೇಕಾಯಿತು. ಲಾಕ್ ಡೌನ್ ಸಡಿಲಗೊಂಡ ಬಳಿಕ ಜೀವನದ ಬಂಡಿ ನಿಧಾನವಾಗಿ ಹಳಿಗೆ ಮರಳುತ್ತಿದೆ. ಜನ ದುಡಿದು ತಿನ್ನೋದಕ್ಕೆ ಶುರು ಮಾಡಿದ್ದಾರೆ.
ಆದರೆ, ಗದಗ ನಗರದಲ್ಲಿ ಮರಿ ಪುಢಾರಿಯೊಬ್ಬ ದುಡಿದು ತಿನ್ನೋರ ತಟ್ಟೆಗೆ ಕೈ ಹಾಕಿದ್ದು, ಆಟೋ ಚಾಲಕರಿಗೆ ಧಮ್ಕಿ ಹಾಕಿ ಕಿರುಕುಳ ನೀಡುತ್ತಿದ್ದಾನೆಂಬ ಆರೋಪ ಕೇಳಿ ಬಂದಿದೆ. ಈತನ ಉಪಟಳದಿಂದ ರೋಸಿಹೋದ ಆಟೋ ಚಾಲಕರು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.

ನಗರದ ಸೆಟಲ್ಮೆಂಟ್ ಏರಿಯಾ ನಿವಾಸಿ ರೋಹಿತ್ ಕಟ್ಟಿಮನಿ ಎಂಬ ಯುವಕ ಎಸ್.ಎಮ್. ಕೃಷ್ಣ ನಗರದ ಆಟೋ ಸ್ಟ್ಯಾಂಡ್ ಗೆ ನುಗ್ಗಿ ಪುಂಡಾಟಿಕೆ ಮಾಡುತ್ತಿದ್ದಾನೆ. ಆಟೋ ಚಾಲಕರಿಗೆ ಧಮ್ಕಿ ಹಾಕುವುದು, ಪೀಡಿಸುವುದನ್ನೇ ಈತ ಕಾಯಕ ಮಾಡ್ಕೊಂಡಿದ್ದಾನೆ. ಕಲ್ಲು ಎತ್ತಿ ಹಾಕಿ ಆಟೋ ಗ್ಲಾಸ್ ಒಡೆಯುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಈತನ ಉಪಟಳದಿಂದ ದಂಧೆ ನಡೆಸುವುದೇ ಕಷ್ಟವಾಗಿದೆ ಎಂದು ಕೆಲ ಚಾಲಕರು ಆರೋಪಿಸಿದ್ದಾರೆ.
ಈತನ ಉಪಟಳದಿಂದ ರೋಸಿ ಹೋದ ಎಸ್.ಎಮ್. ಕೃಷ್ಣ ಬಡಾವಣೆ ಆಟೋ ಚಾಲಕರು ಆಟೋಗಳೊಂದಿಗೆ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ ಮರಿಪುಢಾರಿಯ ಉಪಟಳಕ್ಕೆ ಬ್ರೇಕ್ ಹಾಕುವಂತೆ ಪಿಎಸ್ಐ ಅವರಿಗೆ ಮನವಿ ಮಾಡಿದ್ದಾರೆ.
ನಗರದಲ್ಲಿ ಆಟೋ ಚಾಲಕರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ರಾತ್ರಿ ಹೊತ್ತು ಕಿಡಿಗೇಡಿಗಳು ಟಾಯರ್ ಸೇರಿ ಬಿಡಿಭಾಗ ಕಳವು ಮಾಡುತ್ತಿದ್ದಾರೆ. ಚಾಲಕರಿಗೆ ಜೀವ ಬೆದರಿಕೆ, ಮನೆಯ ಮಹಿಳೆಯರ ಅಪಹರಣ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಆಟೋ ಚಾಲಕರು ಜೀವಭಯದಲ್ಲಿ ದಿನ ಕಳೆಯುವಂತಾಗಿದೆ.
ಪೊಲೀಸರು ಇಂತಹ ಮರಿ ಪುಢಾರಿಗಳ ವಿರುದ್ದ ಕ್ರಮ ಕೈಗೊಂಡು ಆಟೋ ಚಾಲಕರಿಗೆ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ಜಿಲ್ಲೆಯ ಎಲ್ಲ ಆಟೋ ಚಾಲಕರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.