ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು
ಪಾರ್ಟಿಗಾಗಿ ಹೊರಟಿದ್ದ ಅರಣ್ಯಾಧಿಕಾರಿಗಳನ್ನು ತೆಡೆದಿದ್ದ ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರ ಮೇಲೆಯೇ ಕೇಸ್ ದಾಖಲಿಸಿರುವ ಘಟನೆ ನಡೆದಿದೆ.
ಜಿಲ್ಲೆಯ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ನಾಲ್ವರ ಮೇಲೆ ಎಫ್ ಐಆರ್ ದಾಖಲಾಗಿದೆ.
ಭದ್ರಾ ಅಭಯಾರಣ್ಯದ ಮುತ್ತೋಡಿ ವಲಯದಲ್ಲಿರುವ ಸೀಗೇಕಾನ್ ಅರಣ್ಯ ಪ್ರವಾಸಿ ಮಂದಿರದಲ್ಲಿ ಬುಧವಾರ ರಾತ್ರಿ ಹೊತ್ತು ಅರಣ್ಯಾಧಿಕಾರಿಗಳು ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ನಂತರ ಗುರುವಾರ ಇವರು ತಾಲೂಕು ಸಂತವೇರಿಯ ಬೇಟೆ ನಿಗ್ರಹ ದಳದ ಬಳಿ ಪಾರ್ಟಿಗೆ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಗ್ರಾಮಸ್ಥರು ಅಡ್ಡಗಟ್ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ರಾಜ್ಯ ಅರಣ್ಯ ಪಡೆ ಮುಖ್ಯಸ್ಥ ಸಂಜಯ್ ಮೋಹನ್ ಮತ್ತು ಅವರ ಸಿಬ್ಬಂದಿ 10ಕ್ಕೂ ಹೆಚ್ಚು ಕಾರುಗಳಲ್ಲಿ ತೆರಳುತ್ತಿದ್ದರು. ಇವುಗಳನ್ನು ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೇ, ಪಾರ್ಟಿಗಾಗಿಯೇ ಈ ಸಿಬ್ಬಂದಿ 10ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಇವರೆಲ್ಲ ಪಾರ್ಟಿಗಾಗಿ ಸಂತವೇರಿ ಸಮೀಪದ ಗೇಮ್ ಫಾರೆಸ್ಟ್ ನತ್ತ ಹೊರಟಿದ್ದರು. ಗ್ರಾಪಂ ಸದಸ್ಯರು ಸೇರಿದಂತೆ ಗ್ರಾಮಸ್ಥರು ತಡೆದು ಪ್ರಶ್ನಿಸಿದ್ದಾರೆ. ಆಗ ಅಧಿಕಾರಿಗಳು ಮರಳಿ ಹೋಗಿದ್ದರು ಎನ್ನಲಾಗಿದೆ.
ಆದರೆ, ಸದ್ಯ ಅಧಿಕಾರಿಗಳನ್ನು ತಡೆದ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ಮೇಲೆಯೇ ದೂರು ದಾಖಲಾಗಿದೆ. ಇದಕ್ಕ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.