ವಿಜಯಸಾಕ್ಷಿ ಸುದ್ದಿ, ಗದಗ
75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ, ಕಾಂಗ್ರೆಸ್ ವತಿಯಿಂದ ಮನೆಮನೆಗೆ ತೆರಳಿ ಜನಜಾಗೃತಿ ಮೂಡಿಸುವ ಅಭಿಯಾನ ಇಂದು ನಡೆಯಿತು. ಗದಗ ನಗರದ ವಿವಿಧ ವಾರ್ಡ್ ಗಳಲ್ಲಿ ಮನೆ ಮನೆಗೂ ಭೇಟಿ ನೀಡಿದ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರು ಜಾಗೃತಿ ಮೂಡಿಸಿದರು.
ದೇಶಭಕ್ತಿ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಲಾಯಿತು. ಅಭಿಮಾನಿಗಳು ಶಾಸಕರನ್ನು ಪ್ರೀತ್ಯಾದರಗಳಿಂದ ಮನೆಗೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಎಚ್.ಕೆ.ಪಾಟೀಲರು, ಗದಗನಲ್ಲಿ ನಾವು ಜನಜಾಗೃತಿ ಅಭಿಯಾನ ನಡೆಸಿದ್ದೇವೆ. ಜವಾಹರಲಾಲ್ ನೆಹರೂ ಕಾಲದಿಂದ ಪ್ರಾರಂಭಿಸಿ, ಮನಮೋಹನ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಅಭೂತಪೂರ್ವ ಪ್ರಗತಿ ಸಾಧಿಸಿದ ಕುರಿತು ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಸೇರಿ ಮನೆಮನೆಗೂ ತೆರಳಿ, ವಿವರಿಸಿ, ರಾಷ್ಟ್ರಭಕ್ತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.
ಸಿದ್ಧರಾಮಯ್ಯನವರ ಮೇಲೆ ಮೊಟ್ಟೆ ಎಸೆತದ ಪ್ರಕರಣದ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಚಿವರು, ನಮ್ಮ ರಾಜ್ಯದಲ್ಲಿ ಇದುವರೆಗೂ ಇಲ್ಲದೇ ಇರುವಂಥ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಾರೆ. ಇಂಥವರಿಗೆ ಎಚ್ಚರಿಕೆ ಕೊಡಲು ಬಯಸುತ್ತೇವೆ, ರಾಜ್ಯದ ರಾಜಕೀಯ ಸಂಸ್ಕೃತಿಯನ್ನು ಕೆಡಿಸಬೇಡಿ. ನೀವೇನಾದರೂ ಈ ರೀತಿಯ ಪ್ರಕರಣಗಳನ್ನು ಪ್ರಾರಂಭಿಸಿದರೆ ಬಹಳ ತೊಂದರೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿದ್ಧರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದ ಸಂಪತ್ ಕಾಂಗ್ರೆಸ್ನವನಾ, ಬಿಜೆಪಿಯವನಾ ಎನ್ನುವ ವಿಷಯಕ್ಕೇ ಜಟಾಪಟಿ ನಡೆಯುತ್ತಿದೆ. ಆತ ಕಾಂಗ್ರೆಸ್ನವನು ಎಂದವರಾರು? ಅಪ್ಪಚ್ಚು ರಂಜನ್, ಸಂಪತ್ ಜೊತೆಗೇ ಇರುವ ಫೋಟೋನೇ ಇದೆ. ಇದಕ್ಕೆ ಬೇರೆ ಪುರಾವೆ ಬೇಕಾ? ಅಪ್ಪಚ್ಚು ರಂಜನ್ ಕಾಂಗ್ರೆಸ್ನವನಾ? ಅಲ್ಲಿಗೆ ಹಿನ್ನೆಲೆಯೇನೆಂಬುದು ಸಾಬೀತಾಯ್ತಲ್ಲವಾ? ರಾಜಕೀಯ ಕಾರಣಕ್ಕಾಗಿ ಅಲ್ಲದೇ ವೈಯಕ್ತಿಕ ದ್ವೇಷದ ವಿಚಾರಕ್ಕೆ ಮೊಟ್ಟೆ ಎಸೆದರಾ? ಇಂಥ ಬೇಜವಾಬ್ದಾರಿಯ ಹೇಳಿಕೆಗಳಿಗೆ ನಾನು ಉತ್ತರಿಸುವದಿಲ್ಲ.
ಮಾತನಾಡುವವರಿಗೆ ಜವಾಬ್ದಾರಿ ಇರಬೇಕು. ಟೀಕೆ ಮಾಡುವ ಅಧಿಕಾರ ಅವರಿಗಿದೆ. ಆದರೆ, ಮೊಟ್ಟೆ ಎಸೆದೆ, ಟೊಮೆಟೋ ಎಸೆದೆ, ಕಲ್ಲು ಎಸೆದೆ ಇತ್ಯಾದಿ ಕರ್ನಾಟಕದಲ್ಲಿ ಇಲ್ಲದೇ ಇರುವ ಕೆಟ್ಟ ಸಂಸ್ಕೃತಿಗೆ ಯಾರೂ ಕೈಹಾಕಬಾರದು ಎಂಬ ಎಚ್ಚರಿಕೆಯನ್ನು ಮತದಾರರೂ ಕೊಡುತ್ತಾರೆ ಎಂದು ಚಾಟಿ ಬೀಸಿದರು.