ವಿಜಯಸಾಕ್ಷಿ ಸುದ್ದಿ, ಗದಗ
ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸದ ಹಿನ್ನೆಲೆ ಅಭಿಮಾನಿಗಳು ಗ್ರಾಪಂ ಪಿಡಿಒ ಅವರಿಗೆ ಮುತ್ತಿಗೆ ಹಾಕಿ ಎಳೆದಾಡಿದ ಘಟನೆ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಘಟನೆ ಮಂಗಳವಾರ ನಡೆದಿದೆ.
ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಭಾವಚಿತ್ರ ಇಟ್ಟು ಪೂಜೆ ಮಾಡಬೇಕಿತ್ತು. ಆದರೆ, ಪಿಡಿಒ ಗಾಂಧೀಜಿ ಭಾವಚಿತ್ರಕ್ಕೆ ಮಾತ್ರ ಪೂಜೆ ಸಲ್ಲಿಸಿದ್ದರು.
ಇದರಿಂದ ಆಕ್ರೋಶಗೊಂಡ ರಾಯಣ್ಣ ಅಭಿಮಾನಿಗಳು ಪಿಡಿಓ ರಾಜಕುಮಾರ ಭಜಂತ್ರಿ ಅವರಿಗೆ ಮುತ್ತಿಗೆ ಹಾಕಿ ಎಳೆದಾಡಿ ತೀವ್ರ ತರಾಟೆಗೆ ತೆಗೆದುಕೊಂಡರು.

ಪಿಡಿಓ ಅವರನ್ನು ಎಳೆದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗೆ ನೋಡಿದರೆ ಸ್ವಾತಂತ್ರ್ಯೋತ್ಸವ ದಿನದಂದೇ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆಯೂ ಇದೆ. ಈವರೆಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಮಾತ್ರ ಪೂಜೆ ಸಲ್ಲಿಸುವ ವಾಡಿಕೆ ಇದೆ. ಆದರೆ, ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಈ ಬಾರಿ ರಾಯಣ್ಣ ಭಾವಚಿತ್ರಕ್ಕೂ ಪೂಜೆ ಸಲ್ಲಿಸಬೇಕೆಂದು ಒತ್ತಾಯಿಸಿದ್ದರು. ಆದರೆ, ಈ ಕುರಿತಾಗಿ ಸರ್ಕಾರ ಯಾವುದೆ ಅಧಿಕೃತ ಆದೇಶ ನೀಡದ್ದರಿಂದ ಪಿಡಿಒ ನಿಯಮಾನುಸಾರ ಗಾಂಧೀಜಿ ಭಾವಚಿತ್ರಕ್ಕೆ ಮಾತ್ರ ಪೂಜೆ ಸಲ್ಲಿಸಿದ್ದರು. ಇದು ರಾಯಣ್ಣ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಆಗಸ್ಟ್ 13 ರಂದು ಸರ್ಕಾರದ ಆಧೀನ ಕಾರ್ಯದರ್ಶಿ ಮೊಹಮ್ಮದ್ ನಯೀಮ್ ಮೊಮಿನ್ ಅವರು ಆದೇಶ ಹೊರಡಿಸಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನ ಆಗಸ್ಟ್ 15, ಹಾಗೂ ಹುತಾತ್ಮರಾದ ದಿನ ಜನವರಿ 26 ರಂದು ಸ್ಮರಣಾರ್ಥವಾಗಿ ರಾಜಧಾನಿಯಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಸಲ್ಲಿಸುವಂತೆ ಸೂಚಿಸಲಾಗಿದೆ.
