ಬೆಂಗಳೂರು: ದುಷ್ಟಶಕ್ತಿ ನಿವಾರಣೆ ಹಾಗೂ ವಿಶೇಷ ಪೂಜೆ ಮಾಡುವ ನೆಪದಲ್ಲಿ ಚಾಮರಾಜಪೇಟೆಯ ಮಹಿಳೆಯೊಬ್ಬರಿಂದ ₹2.5 ಕೋಟಿ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹಣ ನೀಡಿದರೆ ₹10 ಕೋಟಿ ಹಿಂದಿರುಗಿಸುವುದಾಗಿ ನಂಬಿಸಿ ವಂಚಿಸಿರುವ ಆರೋಪದ ಮೇರೆಗೆ ಬಾಬಾ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ ಸೇರಿದಂತೆ ಮೂವರ ವಿರುದ್ಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೂರುದಾರರಾದ ಕುಮುದಾ ಅವರು ಮೂಲತಃ ಆಂಧ್ರಪ್ರದೇಶದವರಾಗಿದ್ದು, ಚಾಮರಾಜಪೇಟೆಯಲ್ಲಿ ವಾಸವಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಅವರ ಪುತ್ರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದು, ಮನೆಯೊಳಗೆ ದುಷ್ಟಶಕ್ತಿಗಳು ಪ್ರವೇಶಿಸಿದ್ದರಿಂದಲೇ ಈ ಅನಾಹುತ ಸಂಭವಿಸಿದೆ ಎಂದು ಆರೋಪಿಗಳು ನಂಬಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮನೆಯ ಮೇಲೆ ಸಾಲ ಪಡೆಯುವ ವಿಚಾರದಲ್ಲಿ ಪರಿಚಯವಾಗಿದ್ದ ಮಧ್ಯವರ್ತಿಗಳ ಮೂಲಕ ಅಪ್ಸರ್ ಪಾಷಾ ಎಂಬಾತನನ್ನು ‘ಬಾಬಾ’ ಎಂದು ಪರಿಚಯಿಸಲಾಗಿತ್ತು. ಬಳಿಕ ಮನೆಯಲ್ಲಿ ವಿಶೇಷ ಪೂಜೆ ನಡೆಸುವುದಾಗಿ ಹೇಳಿ ಆರಂಭದಲ್ಲೇ ₹8 ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ಇನ್ನಷ್ಟು ಹಣದ ಅಗತ್ಯವಿದೆ ಎಂದು ನಂಬಿಸಿದ ಆರೋಪಿಗಳು, ರಿಸರ್ವ್ ಬ್ಯಾಂಕ್ನಿಂದ ₹500 ಕೋಟಿ ಬರಲಿದ್ದು, ಅದನ್ನು ಪಡೆಯಲು ತಾತ್ಕಾಲಿಕವಾಗಿ ಹಣ ಬೇಕಾಗಿದೆ. ಈಗ ₹2.5 ಕೋಟಿ ನೀಡಿದರೆ ಬಳಿಕ ₹10 ಕೋಟಿ ಹಿಂದಿರುಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿಗಳ ಮಾತು ನಂಬಿದ ಕುಮುದಾ ಅವರು ಚಾಮರಾಜಪೇಟೆಯಲ್ಲಿದ್ದ ತಮ್ಮ ಮನೆಯನ್ನು ₹8.5 ಕೋಟಿಗೆ ಮಾರಾಟ ಮಾಡಿ, ಅದರಲ್ಲಿ ₹2.5 ಕೋಟಿ ಆರೋಪಿಗಳಿಗೆ ನೀಡಿದ್ದಾರೆ. ಬಳಿಕ ಹಣವನ್ನು ವಾಪಸ್ ಕೇಳಿದಾಗ ಆರೋಪಿಗಳು ಹಣ ನೀಡದೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ಇಷ್ಟೇ ಅಲ್ಲದೆ, ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಈ ಸಂಬಂಧ ಬಾಬಾ ಎಂದು ಹೇಳಲಾಗಿರುವ ಅಪ್ಸರ್ ಪಾಷಾ ಹಾಗೂ ಮಧ್ಯವರ್ತಿಗಳಾದ ಶಂಕರ್ ಮತ್ತು ಭರತ್ ವಿರುದ್ಧ ಸಿಸಿಬಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.



