ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣದ ಪವಿತ್ರ ಕಾಲದಲ್ಲಿ ಮಹಾತ್ಮರು, ಶರಣರು, ಸಂತರು ಹಾಗೂ ಪುಣ್ಯ ಪುರುಷರ ಪುರಾಣ ಪ್ರವಚನ, ಸತ್ಸಂಗ ಮತ್ತು ಧರ್ಮ ಕಾರ್ಯಗಳು ಮನುಷ್ಯನನ್ನು ಸನ್ಮಾರ್ಗದತ್ತ ಕೊಂಡೊಯ್ದು ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೀಡುತ್ತವೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಸೋಮೇಶ್ವರ ಪುರಾಣ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಗುಂಜೂರು ರಾಮಚಂದ್ರ ಶಾಸ್ತ್ರಿ ವಿರಚಿತ ಶ್ರೀ ರೇಣುಕಾದೇವಿ ಮಹಾತ್ಮೆ ಪುರಾಣ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಿತ್ಯದ ಬದುಕಿನ ಜಂಜಾಟದ ನಡುವೆ ಧರ್ಮಕಾರ್ಯ, ಸತ್ಸಂಗ ಹಾಗೂ ಪುರಾಣ-ಪುಣ್ಯಕಥೆಗಳನ್ನು ಆಲಿಸುವುದರಿಂದ ಸಾರ್ಥಕ ಬದುಕಿನ ಮಾರ್ಗ ತೆರೆದುಕೊಳ್ಳುತ್ತದೆ. ಶ್ರಾವಣ ಮಾಸದಲ್ಲಿ ಸಂತರ, ಶರಣರ ಹಾಗೂ ಮಹಾತ್ಮರ ಜೀವನ ಚರಿತ್ರೆಗಳನ್ನು ತಿಳಿದು, ಅವರ ಆದರ್ಶದಂತೆ ಬದುಕಲು ಹಿರಿಯರು ಒಂದು ತಿಂಗಳನ್ನು ಪುರಾಣ ಶ್ರವಣಕ್ಕೆ ಮೀಸಲಿಟ್ಟಿದ್ದಾರೆ ಎಂದರು.
ಸಜ್ಜನರ ಸಹವಾಸ, ಶ್ರೇಷ್ಠರ ಆಚಾರ-ವಿಚಾರ ಹಾಗೂ ಧಾರ್ಮಿಕ ಸಂಸ್ಕಾರ ಮನುಷ್ಯನ ಬದುಕಿಗೆ ಅಗತ್ಯ. ಐತಿಹಾಸಿಕ ಸೋಮೇಶ್ವರ ದೇವಸ್ಥಾನದಲ್ಲಿ ಪುರಾಣ ಆಲಿಸುವ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಬಸವೇಶ ಮಹಾಂತಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿದರು. ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ, ಅರ್ಚಕ ಕೃಷ್ಣಾಜಿ ಪೂಜಾರ, ದಿಗಂಬರ ಪೂಜಾರ, ಶಂಕರ ಬಾಳಿಕಾಯಿ, ನಾಗರಾಜ ಕಳಸಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಂ. ಗುರುಮಹಾಂತಯ್ಯ ಶಾಸ್ತ್ರಿ ಆರಾಧ್ಯಮಠ ಗವಾಯಿಗಳು ಪುರಾಣ ಪಠಣ-ಪ್ರವಚನ ನಡೆಸಿಕೊಟ್ಟರು. ಶಿವಾನಂದ ಹಿರೇಮಠ ತಬಲಾ ಸಾಥ್ ನೀಡಿದರು. ಬಳಿಕ ಮಹಾಪ್ರಸಾದ ಸೇವೆ ನಡೆಯಿತು. ಪ್ರತಿದಿನ ಸಂಜೆ 7 ಗಂಟೆಯಿಂದ ಪುರಾಣ ಪ್ರವಚನ ನಡೆಯಲಿದೆ.
“ಧರ್ಮಕಾರ್ಯ, ಸತ್ಸಂಗ ಹಾಗೂ ಪುರಾಣ-ಪುಣ್ಯಕಥೆಗಳನ್ನು ಆಲಿಸುವುದರಿಂದ ಸಾರ್ಥಕ ಬದುಕಿನ ಮಾರ್ಗ ತೆರೆದುಕೊಳ್ಳುತ್ತದೆ.”
— ಶ್ರೀ ಚನ್ನವೀರ ಮಹಾಸ್ವಾಮಿಗಳು, ಹೂವಿನಶಿಗ್ಲಿ ವಿರಕ್ತಮಠ



